ಆಗಸ್ಟ್ 24 – ಯೇಸುವನ್ನು ಮುಟ್ಟಿರಿ!
“…ಆತನನ್ನು – ನಿನ್ನ ಉಡುಪಿನ ಗೊಂಡೆಯನ್ನಾದರೂ ಮುಟ್ಟಗೊಡಿಸಬೇಕೆಂದು ಬೇಡಿಕೊಂಡರು. ಮುಟ್ಟಿದವರೆಲ್ಲರೂ ಸ್ವಸ್ಥರಾದರು.” (ಮತ್ತಾ 14:36)
ಅಪೊಸ್ತಲನಾದ ಯೋಹಾನನು ಹೀಗೆ ಬರೆಯುತ್ತಾನೆ: “ನಾವು ನಿಮಗೆ ಪ್ರಸಿದ್ಧಿಪಡಿಸುವ ಜೀವವಾಕ್ಯವು ಆದಿಯಿಂದ ಇದ್ದದ್ದು. ನಾವು ಅದನ್ನು ಕಣ್ಣಾರೆ ಕಂಡು ಮನಸ್ಸಿಟ್ಟು ನೋಡಿ ಕೈಯಿಂದ ಮುಟ್ಟಿದ್ದೇವೆ. ” (1 ಯೋಹಾ 1:1)
ಕರ್ತನಾದ ಯೇಸು ಕ್ರಿಸ್ತನ ಲೌಕಿಕ ಸೇವೆಯ ಸಮಯದಲ್ಲಿ ಅನೇಕರು ಆತನನ್ನು ಶಾರೀರಿಕವಾಗಿ ಮುಟ್ಟಿದರು, ಇನ್ನು ಕೆಲವರು ನಂಬಿಕೆಯ ಮೂಲಕ ಆತನನ್ನು ಮುಟ್ಟಿದರು.
ಒಬ್ಬ ಕಾನಾನ್ಯ ಸ್ತ್ರೀಯು ಕಷ್ಟಕರವಾದ ಅಗತ್ಯದ ಭಾರದೊಂದಿಗೆ ಯೇಸುವಿನ ಬಳಿಗೆ ಬಂದಳು. ಆಕೆಯ ಮಗಳಿಗೆ ದೆವ್ವ ಹಿಡಿದು ಬಹಳ ವೇದನೆಯಾಗುತ್ತಿತ್ತು. ಆಕೆಯು ಅನ್ಯದೇಶದವಳಾಗಿದ್ದರಿಂದ ಆತನನ್ನು ಸುಲಭವಾಗಿ ಸಮೀಪಿಸಲು ಸಾಧ್ಯವಾಗಲಿಲ್ಲ. ಮೇಲಾಗಿ ಯೇಸು, “ಮಕ್ಕಳು ತಿನ್ನುವ ರೊಟ್ಟಿಯನ್ನು ತಕ್ಕೊಂಡು ನಾಯಿಮರಿಗಳಿಗೆ ಹಾಕುವುದು ಸರಿಯಲ್ಲ” ಎಂದನು.
ಆದರೂ ಆಕೆಯು ಆತನನ್ನು ತಲುಪಲು ದೃಢನಿಶ್ಚಯ ಉಳ್ಳವಳಾಗಿದ್ದಳು. ಆಕೆಯು ಆತನನ್ನು ಹೇಗೆ ಮುಟ್ಟಿದಳು ಗೊತ್ತೇ? ಆಕೆಯು, “ಸ್ವಾಮಿ, ಆ ಮಾತು ನಿಜವೇ; ಮೇಜಿನ ಕೆಳಗಿರುವ ನಾಯಿಮರಿಗಳಂತೂ ಮಕ್ಕಳ ಕೈಯಿಂದ ಬೀಳುವ ರೊಟ್ಟಿತುಂಡುಗಳನ್ನು ತಿನ್ನುತ್ತವಲ್ಲಾ” ಎಂದು ಉತ್ತರಿಸಿದಳು. (ಮಾರ್ಕ 7:28) ಆಕೆಯ ದೀನತೆ ಮತ್ತು ಸ್ಥಿರವಾದ ನಂಬಿಕೆಯಿಂದ ಆಕೆಯು ಯೇಸುವಿನ ಹೃದಯವನ್ನೇ ಮುಟ್ಟಿದಳು. ಆಕೆಯ ನಂಬಿಕೆಯಿಂದ ಕೂಡಿದ ಉತ್ತರದಿಂದಾಗಿ ಆಕೆಯ ಮಗಳಿಗೆ ಬಿಡುಗಡೆ ಸಿಕ್ಕಿತು.
ಅಂತೆಯೇ, ಶತಾಧಿಪತಿಯು ಕರ್ತನನ್ನು ತನ್ನ ಕೈಗಳಿಂದಲ್ಲ, ನಂಬಿಕೆಯ ಮಾತುಗಳಿಂದ ಮುಟ್ಟಿದನು. ಅವನು, “ಪ್ರಭುವೇ, ನೀನು ನನ್ನ ಮನೆಗೆ ಬರತಕ್ಕಷ್ಟು ಯೋಗ್ಯತೆ ನನ್ನಲಿಲ್ಲ; ನೀನು ಒಂದು ಮಾತು ಹೇಳಿದರೆ ಸಾಕು, ನನ್ನ ಆಳಿಗೆ ಗುಣವಾಗುವದು” ಎಂದನು. (ಮತ್ತಾ 8:8) ಆ ನಂಬಿಕೆಯ ಮಾತುಗಳು ಯೇಸುವಿನ ಹೃದಯವನ್ನು ಮುಟ್ಟಿದವು. ಕರ್ತನೇ ಆಶ್ಚರ್ಯಪಟ್ಟು, ಇಸ್ರಾಯೇಲಿನಲ್ಲಿಯೂ ತಾನು ಇಷ್ಟೊಂದು ದೊಡ್ಡ ನಂಬಿಕೆಯನ್ನು ಕಾಣಲಿಲ್ಲವೆಂದು ಹೇಳಿದನು. ಅವನ ಸೇವಕನು ಗುಣ ಹೊಂದಿದನು.
ಹುಟ್ಟು ಕುರುಡನೊಬ್ಬನು ಸಹ ಯೇಸುವನ್ನು ತನ್ನ ಕೈಗಳಿಂದಲ್ಲ, ತನ್ನ ನಿರಂತರ ಕೂಗಿನ ಮೂಲಕ ಮುಟ್ಟಿದನು. ಅವನು ಮತ್ತೆ ಮತ್ತೆ, “ದಾವೀದನ ಮಗನೇ, ನನಗೆ ಕರುಣೆತೋರಿಸು!” ಎಂದು ಬೇಡಿಕೊಂಡನು. ಅವನ ಅಂತಃಕರಣದ ಕೂಗು ಕರ್ತನ ಹೃದಯವನ್ನು ಕರುಣೆಯಿಂದ ಕರಗಿಸಿತು, ಮತ್ತು ಅವನಿಗೆ ದೃಷ್ಟಿ ಸಿಕ್ಕಿತು.
ಒಬ್ಬ ಬಡ ವಿಧವೆಯೂ ಸಹ ಕರ್ತನ ಹೃದಯವನ್ನು ಮುಟ್ಟಿದಳು. ಆಕೆಯು ತನಗಿದ್ದ ಎಲ್ಲವನ್ನೂ ದೇವರಿಗೆ ಅರ್ಪಣಾಭಾವದಿಂದ ಸಂತೋಷದಿಂದ ಕೊಟ್ಟಳು. ಆಕೆಯ ಸಂಪೂರ್ಣ ಸಮರ್ಪಣೆಯಿಂದ ಸಂತೋಷಗೊಂಡ ಯೇಸು, “ಈ ಬಡ ವಿಧವೆಯು ಎಲ್ಲರಿಗಿಂತ ಹೆಚ್ಚಾಗಿ ಹಾಕಿದ್ದಾಳೆ” ಎಂದು ಆಕೆಯನ್ನು ಮೆಚ್ಚಿದನು.
ಜಕ್ಕಾಯನೂ ಸಹ ಕರ್ತನನ್ನು ಮುಟ್ಟಿದನು. ಆಲದ ಮರದ ಮೇಲೆ ಕುಳಿತಿದ್ದ ಅವನು ತನ್ನ ಜೀವನವನ್ನೇ ಬದಲಾಯಿಸುವ ತೀರ್ಮಾನವನ್ನು ಮಾಡಿದನು. ಅವನು, “ನಾನು ಯಾರಿಂದಲಾದರೂ ಅನ್ಯಾಯವಾಗಿ ಏನನ್ನಾದರೂ ಎಳೆದುಕೊಂಡಿದ್ದೇಯಾದರೆ ನಾಲ್ಕರಷ್ಟು ಹಿಂದಕ್ಕೆ ಕೊಡುತ್ತೇನೆ.” ಎಂದು ಘೋಷಿಸಿದನು. ಆ ಪ್ರಾಮಾಣಿಕ ಪಶ್ಚಾತ್ತಾಪವು ಯೇಸುವಿನ ಹೃದಯವನ್ನು ಮುಟ್ಟಿತು, ಮತ್ತು ಕರ್ತನು ಸಂತೋಷದಿಂದ, “ಈ ಹೊತ್ತು ಈ ಮನೆಗೆ ರಕ್ಷಣೆಯಾಯಿತು” ಎಂದು ಸಾರಿದನು.
ಪ್ರೀತಿಯ ದೇವರ ಮಗುವೇ, ನೀನು ಕೂಡ ನಂಬಿಕೆಯ ಮಾತುಗಳ ಮೂಲಕ ಯೇಸುವನ್ನು ಮುಟ್ಟಬಹುದು. ನೀನು ದೀನತೆಯಿಂದ, ನಂಬಿಕೆಯುಳ್ಳ ಪ್ರಾರ್ಥನೆಯಿಂದ ಆತನ ಬಳಿಗೆ ಬರುವಾಗ, ಆತನು ನಿನಗೆ ಬಿಡುಗಡೆಯನ್ನು, ಸ್ವಸ್ಥತೆಯನ್ನು ಮತ್ತು ನಿನಗೆ ಬೇಕಾದ ಪ್ರತಿಯೊಂದು ಆಶೀರ್ವಾದವನ್ನು ನೀಡಲು ಶಕ್ತನಾಗಿದ್ದಾನೆ.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ:
“ಆಗ ಯೆಹೋವನು ಕೈಚಾಚಿ ನನ್ನ ಬಾಯನ್ನು ಮುಟ್ಟಿ ಇಗೋ ನಿನ್ನ ಬಾಯಲ್ಲಿ ನನ್ನ ಮಾತುಗಳನ್ನು ಇಟ್ಟದ್ದೇನೆ ಎಂದನು.” (ಯೆರೆ 1:9)