Appam, Appam - Kannada

ಜೂನ್ 11 – ಹಗುರವಾದ ಸಂಕಟ!

“ಹೇಗಂದರೆ ಕ್ಷಣಮಾತ್ರವಿರುವ ನಮ್ಮ ಹಗುರವಾದ ಸಂಕಟವು ಅತ್ಯಂತಾಧಿಕವಾದ ಪ್ರತಿಫಲವನ್ನು ಉಂಟುಮಾಡಿ ನಮಗೆ ನಿರಂತರವಾದ ಗೌರವವಾದ ಪ್ರಭಾವವನ್ನು ದೊರಕಿಸುತ್ತದೆ.” (2 ಕೊರಿ 4:17)

ನಾವು ಈ ಲೋಕದಲ್ಲಿ ಪ್ರಯಾಣಿಸುವಾಗ, ಕರ್ತನು ನಮಗೆ ಕೆಲವು ಆಧಾರಗಳನ್ನು ನೀಡುತ್ತಾನೆ. ಆತನು ನಮಗೆ ಸಹಾಯ ಮಾಡುವ ಜನರನ್ನು, ಕೆಲಸಗಳನ್ನು, ಸಂದರ್ಭಗಳನ್ನು ಮತ್ತು ಸ್ಥಳಗಳನ್ನು ಒದಗಿಸುತ್ತಾನೆ. ಆದರೆ ನಾವು ಕರ್ತನ ಮೇಲೆ ಭರವಸೆ ಇಡುವ ಬದಲು ಆ ಆಧಾರಗಳ ಮೇಲೆಯೇ ಅವಲಂಭಿತರಾಗಲು ಪ್ರಾರಂಭಿಸಿದಾಗ, ಆತನು ಕೆಲವೊಮ್ಮೆ ಅವುಗಳನ್ನು ನಮ್ಮಿಂದ ದೂರ ಮಾಡುತ್ತಾನೆ.

ಅಂತಹ ಸಮಯದಲ್ಲಿ ನಮ್ಮ ಹೃದಯಗಳು ಕಳವಳಗೊಳ್ಳುತ್ತವೆ. ಕರ್ತನು ಇದನ್ನು ಏಕೆ ಅನುಮತಿಸಿದನು ಎಂದು ನಾವು ದುಃಖಿಸುತ್ತಾ ಕೇಳುತ್ತೇವೆ. ಆದರೆ ದಿನಗಳು ಕಳೆದಂತೆ, ಆ ಆಧಾರಗಳಿಲ್ಲದೆಯೂ ನಾವು ಬದುಕಬಹುದು ಎಂಬುದನ್ನು ಮತ್ತು ನಮಗೆ ನಷ್ಟವೆಂದು ತೋರಿದ್ದು ವಾಸ್ತವವಾಗಿ ಲಾಭವಾಗಿತ್ತು ಎಂಬುದನ್ನು ನಾವು ಅರಿತುಕೊಳ್ಳಲು ಪ್ರಾರಂಭಿಸುತ್ತೇವೆ. ಆಗ ನಮ್ಮ ಹಗುರವಾದ ಕಷ್ಟವು ನಮಗಾಗಿ ನಿರಂತರವಾದ ಮಹಿಮೆಯನ್ನು ಉಂಟುಮಾಡುತ್ತಿದೆ ಎಂಬುದು ನಮಗೆ ಸ್ಪಷ್ಟವಾಗಿ ಅರ್ಥವಾಗುತ್ತದೆ.

ಒಂದು ಸಣ್ಣ ಗಿಡವು ದೊಡ್ಡ ಆಲದ ಮರದ ನೆರಳಿನಲ್ಲಿ ಬೆಳೆಯುತ್ತಿತ್ತು. ಆ ವಿಶಾಲವಾದ ಕೊಂಬೆಗಳ ಆಶ್ರಯದಲ್ಲಿ ಅದು ಸಂತೋಷವಾಗಿತ್ತು. ಆದರೆ ಒಂದು ದಿನ, ಆ ಜಾಗದ ಮಾಲೀಕನು ಆ ಬಲಿಷ್ಠ ಮರವನ್ನು ಕೊಡಲಿಯಿಂದ ಕಡಿದು ಹಾಕಿದನು.

ಆ ಚಿಕ್ಕ ಗಿಡವು ಕಣ್ಣೀರು ಹಾಕುತ್ತಾ ಹೀಗೆ ಪ್ರಲಾಪಿಸಿತು: “ಅಯ್ಯೋ, ನನ್ನ ಆಶ್ರಯ ಹೊರಟುಹೋಯಿತು! ನನ್ನ ನೆರಳು ಇಲ್ಲದಂತಾಯಿತು! ಬಿರುಗಾಳಿ ಬಂದಾಗ ನನ್ನ ಗತಿ ಏನು?”

ಆದರೆ ಸ್ವಲ್ಪ ಸಮಯದ ನಂತರ, ಬೆಚ್ಚಗಿನ ಸೂರ್ಯನ ಬೆಳಕು ಆ ಚಿಕ್ಕ ಗಿಡದ ಮೇಲೆ ನೇರವಾಗಿ ಬೀಳಲು ಪ್ರಾರಂಭಿಸಿತು. ಮಳೆನೀರು ಅದಕ್ಕೆ ಮುಕ್ತವಾಗಿ ಸಿಕ್ಕಿತು. ತಂಗಾಳಿಯು ಅದನ್ನು ಪ್ರಫುಲ್ಲಗೊಳಿಸಿತು. ಆಗ ಆ ಗಿಡವು ನೆಮ್ಮದಿ ಮತ್ತು ಶಕ್ತಿಯನ್ನು ಕಂಡುಕೊಂಡು ಹೀಗೆ ಅಂದುಕೊಂಡಿತು: “ಆಲದ ಮರವು ಇಲ್ಲದಿದ್ದರೂ, ಅದನ್ನು ಸೃಷ್ಟಿಸಿದ ಕರ್ತನು ಇನ್ನು ನನ್ನೊಂದಿಗಿದ್ದಾನೆ.”

ಯೋನನ ಕುರಿತು ಯೋಚಿಸಿ. ಸತ್ಯವೇದವು ಹೀಗೆ ಹೇಳುತ್ತದೆ: “ಆಗ ದೇವರಾದ ಯೆಹೋವನು ಯೋನನ ಮೇಲ್ಗಡೆ ಒಂದು ಸೋರೆಗಿಡವು ಹಬ್ಬಿ ಅವನ ಕರೆಕೆರಯನ್ನು ತಪ್ಪಿಸುವಂತೆ ಏರ್ಪಡಿಸಿದನು. ಆ ಸೋರೆಗಿಡದಿಂದ ಯೋನನಿಗೆ ಬಹು ಸಂತೋಷವಾಯಿತು.” (ಯೋನ 4:6)

ಯೋನನು ಆ ಗಿಡದ ಬಗ್ಗೆ ಆನಂದಪಟ್ಟನೇ ಹೊರತು, ಆತ್ಮಗಳಿಗಾಗಿ ಮರುಗಲಿಲ್ಲ. ಆತನನ್ನು ಉನ್ನತವಾದ ರೀತಿಯಲ್ಲಿ ಆಶೀರ್ವದಿಸಬಲ್ಲ ಕರ್ತನಿಗಿಂತ ಹೆಚ್ಚಾಗಿ ಆ ಗಿಡದಲ್ಲಿಯೇ ಅವನು ಸಂತೋಷಪಟ್ಟನು. ಆಶೀರ್ವಾದವನ್ನು ನೀಡಿದ ದೇವರನ್ನು ಆತನು ಸ್ತುತಿಸಲಿಲ್ಲ.

ಆದ್ದರಿಂದ ಮಾರನೆಯ ದಿನ ಮುಂಜಾನೆ, ದೇವರು ಒಂದು ಹುಳವನ್ನು ಸಿದ್ಧಮಾಡಿದನು. ಅದು ಆ ಗಿಡವನ್ನು ಕಚ್ಚಿ ತಿನ್ನಲು ಅದು ಒಣಗಿಹೋಯಿತು.

ಪ್ರೀತಿಯ ದೇವರ ಮಕ್ಕಳೇ, ಕರ್ತನು ನಿಮಗೆ ಆಧಾರಗಳನ್ನು ಮತ್ತು ಸೌಕರ್ಯಗಳನ್ನು ನೀಡಿದಾಗ, ಆತನ ಮೇಲೆಯೇ ಅವಲಂಬಿತರಾಗಿರಿ ಮತ್ತು ಆತನನ್ನು ಸ್ತುತಿಸಿರಿ. ಒಂದು ವೇಳೆ ಆ ಆಧಾರಗಳನ್ನು ತೆಗೆದುಹಾಕಿದರೆ, ಧೈರ್ಯಗೆಡಬೇಡಿ. ದೇವರನ್ನು ಪ್ರೀತಿಸುವವರಿಗೆ ಎಲ್ಲವೂ ಒಳ್ಳೆಯದಕ್ಕಾಗಿಯೇ ಸಂಭವಿಸುತ್ತದೆ ಎಂದು ನಂಬಿರಿ ಮತ್ತು ಯಾವಾಗಲೂ ಆತನಿಗೆ ಕೃತಜ್ಞತಾ ಸ್ತುತಿಗಳನ್ನು ಸಲ್ಲಿಸಿರಿ.

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಕಷ್ಟಾನುಭವವು ಹಿತಕರವಾಯಿತು; ಅದರಿಂದಲೇ ನಿನ್ನ ನಿಬಂಧನೆಗಳನ್ನು ಕಲಿತೆನು.” (ಕೀರ್ತ 119:71)

Leave A Comment

Your Comment
All comments are held for moderation.