ಜೂನ್ 16 – ಆದರೆ ಕರ್ತನು!
“ಆಗ ಮಹಾಯಾಜಕನು ಎದ್ದು ನಿಂತು – ‘ನೀನೇನೂ ಹೇಳುವುದಿಲ್ಲವೋ? ಇವರು ನಿನ್ನ ಮೇಲೆ ಹೇಳುವ ಈ ಸಾಕ್ಷಿ ಏನು ಎಂದು ಆತನನ್ನು ಕೇಳಿದನು. ಆದರೆ ಯೇಸು ಸುಮ್ಮನಿದ್ದನು” (ಮತ್ತಾ 26:62,63)
ಇಲ್ಲಿ ಕರ್ತನಾದ ಯೇಸು ಮೌನವನ್ನೇ ತನ್ನ ಉತ್ತರವನ್ನಾಗಿ ನೀಡುವುದನ್ನು ನಾವು ನೋಡುತ್ತೇವೆ. ಅನೇಕರು ಎದ್ದು ಆತನಿಗೆ ವಿರೋಧವಾಗಿ ಸುಳ್ಳು ಸಾಕ್ಷಿ ನುಡಿದರು. ಆದರೂ ಯೇಸು ಮಹಾಯಾಜಕನ ಮುಂದೆ ನಿಂತಾಗ, ತನ್ನ ಸ್ವಂತ ನೀತಿಯನ್ನು ಸಮರ್ಥಿಸಿಕೊಳ್ಳಲು ಅಥವಾ ತನ್ನನ್ನು ತಾನು ನಿರ್ದೋಷಿಯೆಂದು ನಿರೂಪಿಸಿಕೊಳ್ಳಲು ಪ್ರಯತ್ನಿಸಲಿಲ್ಲ. ಆತನು ಮೌನವಾಗಿಯೇ ಇದ್ದನು.
ಸತ್ಯವೇದ ಹೇಳುತ್ತದೆ: “ಸುಮ್ಮನಿರುವ ಸಮಯ, ಮಾತಾಡುವ ಸಮಯ.” (ಪ್ರಸಂಗಿ 3:7)
ಯೇಸು ಅರಣ್ಯದಲ್ಲಿ ದೇವರ ವಾಕ್ಯವನ್ನು ಸಾರಿದನು. ಆತನು ಸಭಾಮಂದಿರಗಳಲ್ಲಿ ಉಪದೇಶವನ್ನು ಮಾಡಿದನು. ಆತನು ಬೆಟ್ಟದ ಮೇಲೆ ನಿಂತಾಗ, ಜನರ ಗುಂಪುಗಳು ಆತನ ಮುಂದೆ ನೆರೆದವು, ಆಗ ಆತನು ತನ್ನ ಬಾಯನ್ನು ತೆರೆದು ಅವರಿಗೆ ಬೋಧಿಸಿದನು.
ಆದರೆ, ವ್ಯಭಿಚಾರದಲ್ಲಿ ಸಿಕ್ಕಿಬಿದ್ದ ಸ್ತ್ರೀಯನ್ನು ಆತನ ಮುಂದೆ ತಂದು, ಆಕೆಯ ಮೇಲೆ ಅನೇಕ ಆಪಾಧನೆಗಳನ್ನು ಹೊರಿಸಿದಾಗ, ಆತನು ಶಾಂತವಾಗಿ ಕೆಳಗೆ ಬಾಗಿ ನೆಲದ ಮೇಲೆ ಬರೆದನು. ಅವರು ಆತನನ್ನು ಪ್ರಶ್ನಿಸುತ್ತಲೇ ಇದ್ದಾಗ ಆತನು: “ನಿಮ್ಮಲ್ಲಿ ಪಾಪವಿಲ್ಲದವನು ಯಾರೋ ಅವನೇ ಮೊದಲು ಆಕೆಯ ಮೇಲೆ ಕಲ್ಲನ್ನು ಹಾಕಲಿ” ಎಂದು ಹೇಳಿದನು (ಯೋಹಾ 8:7). ನಂತರ ಆತನು ಮತ್ತೆ ಮೌನವಾದನು. ಕಲ್ಲೆಸೆಯಲು ಬಂದವರು ಸುಮ್ಮನೆ ಹೊರಟುಹೋದರು.
ಕೆಲವೊಮ್ಮೆ, ಮೌನವೇ ಒಂದು ಪ್ರಬಲ ಆಯುಧವಾಗುತ್ತದೆ. ಮೌನದ ಮೂಲಕವೇ ಶ್ರೇಷ್ಠ ಕಾರ್ಯಗಳನ್ನು ಸಾಧಿಸಿದ ಜನರಿದ್ದಾರೆ. ಪ್ರಸಿದ್ಧರಾದ ಥಾಮಸ್ ಕೆಂಪಿಸ್ ಅವರು ‘ದಿ ಇಮಿಟೇಷನ್ ಆಫ್ ಕ್ರೈಸ್ಟ್’ (ಕ್ರಿಸ್ತನ ಅನುಕರಣೆ) ಪುಸ್ತಕದ ಪೀಠಿಕೆಯಲ್ಲಿ ಹೀಗೆ ಬರೆದಿದ್ದಾರೆ: “ಮೌನವು ನನ್ನ ಸ್ನೇಹಿತ; ಪ್ರಾರ್ಥನೆಯು ನನ್ನ ಸಂಗಾತಿ.” ಮತ್ತೊಬ್ಬ ದೈವಭಕ್ತನು ಹೀಗೆ ಹೇಳಿದ್ದಾನೆ, “ಜನರೊಂದಿಗಿನ ನಿಮ್ಮ ಸಂಭಾಷಣೆಯನ್ನು ಕಡಿಮೆ ಮಾಡಿರಿ; ದೇವರೊಂದಿಗಿನ ನಿಮ್ಮ ಸಂಭಾಷಣೆಯನ್ನು ಹೆಚ್ಚಿಸಿಕೊಳ್ಳಿರಿ.”
ಅರಸನಾದ ದಾವೀದನು ಏನನ್ನು ಅನುಭವಿಸಿದನು ಎಂದು ನಿಮಗೆ ಗೊತ್ತೇ? “ನನ್ನ ನಾಲಿಗೆ ಪಾಪಕ್ಕೆ ಹೋಗದಂತೆ ಜಾಗರೂಕನಾಗಿರುವೆನು; ದುಷ್ಟನು ನನ್ನ ಮುಂದೆ ಇರುವಾಗ ಬಾಯಿಗೆ ಕುಕ್ಕೆಹಾಕಿಕೊಂಡಿರುವೆನು ಅಂದು ಕೊಂಡೆನು. ನಾನು ಮೌನವಾಗಿದ್ದೆನು; ಒಳ್ಳೆಯದನ್ನಾದರೂ ಆಡದೆ ಸುಮ್ಮನಿದ್ದೆನು; ಆದರೆ ನನ್ನ ಸಂಕಟವು ಹೆಚ್ಚಿತು.” (ಕೀರ್ತನೆ 39:1,2)
ಇದರ ಫಲಿತಾಂಶವೇನಾಯಿತು? ಮುಂದಿನ ವಚನ ಹೀಗೆ ಹೇಳುತ್ತದೆ: “ನನ್ನ ಹೃದಯದಲ್ಲಿ ಸಂತಾಪ ಉಕ್ಕಿತು; ನಾನು ಯೋಚಿಸುತ್ತಿರುವಲ್ಲಿ ಬೆಂಕಿಯುರಿಯಿತು. ಆಗ ನಾನು ಬಾಯಿಬಿಟ್ಟು ನಾಲಿಗೆಯಿಂದ ಮಾತನಾಡಿದೆನು.” (ಕೀರ್ತ 39:3)
ನಾವು ಮೌನವಾಗಿದ್ದಾಗ, ಕರ್ತನು ನಮಗಾಗಿ ಮಾತನಾಡುತ್ತಾನೆ. ಆತನು ನಮಗಾಗಿ ವಾದಿಸುತ್ತಾನೆ ಮತ್ತು ನಮಗಾಗಿ ಯುದ್ಧವನ್ನು ಮಾಡುತ್ತಾನೆ. ಕರ್ತನು ಹೀಗೆ ಹೇಳುತ್ತಾನೆ:
“ಚೀಯೋನಿನ ಧರ್ಮವು ಪ್ರಕಾಶಗೊಳ್ಳುವ ತನಕ, ಯೆರೂಸಲೇಮಿನ ರಕ್ಷಣೆಯು ದೀವಿಟಿಗೆಯಂತೆ ಪ್ರಜ್ವಲಿಸುವವರೆಗೆ ನಾನು ಮೌನವಾಗಿರದೆ ಚೀಯೋನಿನ ಹಿತವನ್ನು ಲಕ್ಷಿಸುತ್ತಿರುವೆನು; ಸುಮ್ಮನಿರದೆ ಯೆರೂಸಲೇಮಿನ ಕ್ಷೇಮವನ್ನು ಚಿಂತಿಸುತ್ತಿರುವೆನು.” (ಯೆಶಾಯ 62:1)
ಪ್ರಿಯ ದೇವರ ಮಕ್ಕಳೇ, ನಿಮಗಾಗಿ ನೀವೇ ಮಾತನಾಡಿಕೊಂಡರೆ, ಕರ್ತನು ಮೌನವಾಗಿರಬಹುದು. ಆದರೆ ನೀವು ಆತನ ಮುಂದೆ ಮೌನವಾಗಿದ್ದರೆ, ಕರ್ತನೇ ನಿಮಗಾಗಿ ಹೋರಾಡುತ್ತಾನೆ. ನಿಮ್ಮ ಯುದ್ಧಗಳನ್ನು ಹೋರಾಡಲು ಆತನಿಗೆ ಅವಕಾಶ ನೀಡುತ್ತೀರಾ?
ಕರ್ತನು ನಿಮ್ಮ ಎಲ್ಲಾ ವಿಷಯಗಳ ಜವಾಬ್ದಾರಿಯನ್ನು ಹೊತ್ತುಕೊಂಡಿದ್ದಾನೆ. ಆತನು ನಿಮಗಾಗಿ ಎಲ್ಲವನ್ನೂ ನೆರವೇರಿಸಿಕೊಡುತ್ತಾನೆ.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಯೆಹೋವನೋ ತನ್ನ ಪರಿಶುದ್ಧ ಮಂದಿರದಲ್ಲಿದ್ದಾನೆ; ಭೂಲೋಕವೆಲ್ಲಾ ಆತನ ಮುಂದೆ ಮೌನವಾಗಿರಲಿ.” (ಹಬ 2:20)