Appam, Appam - Kannada

ಆಗಸ್ಟ್ 23 – ಕೇಡಿನಿಂದ ನಮ್ಮನ್ನು ತಪ್ಪಿಸು!

“ನಮ್ಮನ್ನು ಶೋಧನೆಯೊಳಗೆ ಸೇರಿಸದೆ ಕೇಡಿನಿಂದ ನಮ್ಮನ್ನು ತಪ್ಪಿಸು.” (ಮತ್ತಾ 6:13)

ಈ ವಚನದ ಕನ್ನಡ ಭಾಷಾಂತರವು “ಕೇಡಿನಿಂದ ನಮ್ಮನ್ನು ತಪ್ಪಿಸು” ಎಂದು ಹೇಳುತ್ತದೆ. ಆದರೆ ಆಂಗ್ಲ ಭಾಷಾಂತರದ ಪೂರ್ಣ ಅರ್ಥವೇನಂದರೆ: “ಕೆಡುಕನಿಂದ ನಮ್ಮನ್ನು ತಪ್ಪಿಸು.” ಆದ್ದರಿಂದ, ದೇವರೇ ನಮ್ಮನ್ನು ಸೈತಾನನೆಂಬ ದುಷ್ಟನ ಕೈಗೆ ಬೀಳದಂತೆ ಕಾಯಬೇಕೆಂದು ನಾವು ಪ್ರಾರ್ಥಿಸಬೇಕು.

ಸೈತಾನನ ಹೆಸರುಗಳಲ್ಲಿ ‘ಶೋಧಕ’ ಎಂಬುದು ಒಂದಾಗಿದೆ. ದೇವರ ಜನರನ್ನು ಶೋಧನೆಯಲ್ಲಿ ಬೀಳಿಸಿ, ಪಾಪದ ಹೊರೆಯಿಂದ ಕುಗ್ಗಿಸಿ, ಅವರ ಆತ್ಮಿಕ ಜೀವನವನ್ನು ಕದಿಯುವುದೇ ಅವನ ಉದ್ದೇಶವಾಗಿದೆ. ಕೆಲವು ಶೋಧನೆಗಳು ಕುಟುಂಬದ ಸಮಾಧಾನವನ್ನು ಹಾಳುಮಾಡುತ್ತವೆ. ಇನ್ನು ಕೆಲವು ಜನರನ್ನು ಆತ್ಮಹತ್ಯೆಯತ್ತ ತಳ್ಳುತ್ತವೆ. ಮತ್ತೂ ಕೆಲವು ನಿಂದೆಯನ್ನು ತಂದು, ವಿಶ್ವಾಸಿಯ ಆತ್ಮಿಕ ಜೀವನವನ್ನು ಹಾಳುಮಾಡಿ, ಮಾಸದ ಗಾಯಗಳನ್ನು ಉಳಿಸುತ್ತವೆ. ಅದಕ್ಕಾಗಿಯೇ, “ತಂದೆಯೇ, ನನ್ನನ್ನು ಶೋಧನೆಯಲ್ಲಿ ಸೇರಿಸದೆ, ದುಷ್ಟನಿಂದ ನನ್ನನ್ನು ತಪ್ಪಿಸು” ಎಂದು ಪ್ರಾರ್ಥಿಸುವುದು ಅತ್ಯಗತ್ಯ.

ಶೋಧನೆ ಬಂದಾಗ ಅನೇಕರು ನಿರಾಶೆಗೊಳ್ಳುತ್ತಾರೆ. ದೇವರೇ ತಮ್ಮ ಜೀವನದಲ್ಲಿ ಪಾಪದ ಶೋಧನೆಗಳನ್ನು ತರುತ್ತಾರೆ ಎಂದು ಕೆಲವರು ತಪ್ಪಾಗಿ ಭಾವಿಸುತ್ತಾರೆ. ಆದರೆ ಸತ್ಯವೇದವು ಹೀಗೆ ತಿಳಿಸುತ್ತದೆ: “ಯಾವನಾದರೂ ಪಾಪಮಾಡುವದಕ್ಕೆ ಪ್ರೇರೇಪಿಸಲ್ಪವಾಗ ಈ ಪ್ರೇರಣೆಯು ನನಗೆ ದೇವರಿಂದ ಉಂಟಾಯಿತೆಂದು ಹೇಳಬಾರದು. ದೇವರು ಕೆಟ್ಟದ್ದಕ್ಕೇನೂ ಸಂಬಂಧಪಟ್ಟವನಲ್ಲ; ಆತನು ಯಾರನ್ನೂ ಪಾಪಕ್ಕೆ ಪ್ರೇರೇಪಿಸುವದಿಲ್ಲ.” (ಯಾಕೋ 1:13)

ಅದೇ ಸಮಯದಲ್ಲಿ, ದೇವರು ಅಬ್ರಹಾಮನನ್ನು ಪರೀಕ್ಷಿಸಿದನು (ಆದಿ 22:1) ಪರೀಕ್ಷೆ, ಶ್ರಮೆ, ಮತ್ತು ಶೋಧನೆ ಎಂಬ ವಿಭಿನ್ನ ಆಲೋಚನೆಗಳಿಗೆ ಕನ್ನಡ ಅಥವಾ ಇತರ ಕೆಲವು ಭಾಷೆಗಳು ಒಂದೇ ರೀತಿಯ ಪದಗಳನ್ನು ಬಳಸುವುದರಿಂದ ಈ ಗೊಂದಲ ಉಂಟಾಗುತ್ತದೆ. ಆದರೆ ಇಂಗ್ಲಿಷ್‌ನಲ್ಲಿ ಈ ಪದಗಳು ಸ್ಪಷ್ಟವಾಗಿ ಬೇರ್ಪಡಿಸಲ್ಪಟ್ಟಿದ್ದು, ಪ್ರತಿಯೊಂದೂ ತನ್ನದೇ ಆದ ವಿಭಿನ್ನ ಅರ್ಥವನ್ನು ಹೊಂದಿವೆ.

ಒಬ್ಬ ವಿದ್ಯಾರ್ಥಿಯು ಮುಂದಿನ ತರಗತಿಗೆ ಬಡ್ತಿ ಪಡೆಯಲು ಅರ್ಹನಾಗಿದ್ದಾನೋ ಇಲ್ಲವೋ ಎಂಬುದನ್ನು ನಿರ್ಧರಿಸಲು ಶಾಲೆ ಪರೀಕ್ಷೆಯನ್ನು ನಡೆಸುತ್ತದೆ. ಅದೇ ರೀತಿಯಲ್ಲಿ, ದೇವರು ತನ್ನ ಮಕ್ಕಳನ್ನು ಪರೀಕ್ಷಿಸುವಾಗ, ಅವರ ಉದ್ದೇಶವು ಅವರನ್ನು ಮುಂದಿನ ಹಂತಕ್ಕೆ ಏರಿಸುವುದು, ಅವರ ಸ್ವಭಾವವನ್ನು ಶುದ್ಧೀಕರಿಸುವುದು, ಅವರಿಗೆ ಹೆಚ್ಚಿನ ಜವಾಬ್ದಾರಿಗಳನ್ನು ವಹಿಸಿಕೊಡುವುದು ಮತ್ತು ತನ್ನ ಸೇವೆಯಲ್ಲಿ ಅವರನ್ನು ಉನ್ನತೀಕರಿಸುವುದಾಗಿದೆ.

ಆದರೆ ಸೈತಾನನು ಶೋಧನೆಯನ್ನು ಮತ್ತು ಶ್ರಮೆಗಳನ್ನು ತೀರಾ ಭಿನ್ನವಾದ ಉದ್ದೇಶಕ್ಕಾಗಿ ಬಳಸುತ್ತಾನೆ – ಒಬ್ಬ ವ್ಯಕ್ತಿಯನ್ನು ಕೆಳಗೆ ಎಳೆಯಲು, ಅವನ ಹೆಸರನ್ನು ನಾಶಮಾಡಲು ಮತ್ತು ಅಂತಿಮವಾಗಿ ಅವನನ್ನು ನಾಶಮಾಡಲು ಉಪಯೋಗಿಸುತ್ತಾನೆ. ಅವನು ಶೋಧಕನು ಮಾತ್ರವಲ್ಲ, ಕಳ್ಳನೂ ಕೊಲೆಗಾರನೂ ಆಗಿದ್ದಾನೆ. ಕರ್ತನಾದ ಯೇಸು ಹೇಳಿದಂತೆ, ಅವನು “ಕದಿಯುವುದಕ್ಕೂ ಕೊಲ್ಲುವುದಕ್ಕೂ ನಾಶಮಾಡುವುದಕ್ಕೂ” ಮಾತ್ರ ಬರುತ್ತಾನೆ.

ಪ್ರಿಯ ದೇವರ ಮಗುವೇ, ಕರ್ತನು ನಿನ್ನನ್ನು ತಗ್ಗಿಸುವಿಕೆಯ ಮತ್ತು ಶ್ರಮೆಯ ಹಂತಗಳ ಮೂಲಕ ಹಾದುಹೋಗಲು ಬಿಡಬಹುದು, ಆದರೆ ಆತನ ಉದ್ದೇಶವು ಸಂಪೂರ್ಣವಾಗಿ ವಿಭಿನ್ನವಾಗಿದೆ. ಆತನು ಇಂತಹ ಅನುಭವಗಳನ್ನು ನಿನಗೆ ಈ ಸತ್ಯವನ್ನು ಕಲಿಸಲು ಬಳಸುತ್ತಾನೆ: “…ಮನುಷ್ಯನು ಆಹಾರ ಮಾತ್ರದಿಂದ ಬದುಕುವದಿಲ್ಲ, ಯೆಹೋವನ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಬದುಕುತ್ತಾನೆ.” (ಧರ್ಮೋ 8:3)

ಪ್ರತಿಯೊಂದು ಪರೀಕ್ಷೆಯಲ್ಲೂ ಆತನನ್ನು ನಂಬಿರಿ. ಆತನು ನಂಬಿಗಸ್ತನಾಗಿದ್ದಾನೆ, ಮತ್ತು ಆತನ ಕೃಪೆಯಿಂದ ಸಹನೆಗೆ ಮೀರಿದ ಶೋಧನೆಯನ್ನು ನಿಮಗೆ ಬರಗೊಡಿಸುವದಿಲ್ಲ.

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಮನುಷ್ಯರು ಸಹಿಸಬಹುದಾದ ಶೋಧನೆಯೇ ಹೊರತು ಬೇರೆ ಯಾವದೂ ನಿಮಗೆ ಸಂಭವಿಸಲಿಲ್ಲ. ದೇವರು ನಂಬಿಗಸ್ಥನು; ನಿಮ್ಮ ಶಕ್ತಿಯನ್ನು ಮೀರುವ ಶೋಧನೆಯನ್ನು ನಿಮಗೆ ಬರಗೊಡಿಸದೆ ನೀವು ಅದನ್ನು ಸಹಿಸುವದಕ್ಕೆ ಶಕ್ತರಾಗುವಂತೆ ಶೋಧನೆಯಾಗುತ್ತಲೇ ತಪ್ಪಿಸಿಕೊಳ್ಳುವ ಮಾರ್ಗವನ್ನು ಸಿದ್ಧಮಾಡುವನು.” (1 ಕೊರಿಂಥ 10:13)

Leave A Comment

Your Comment
All comments are held for moderation.