ಜುಲೈ 02 – ಮನುಷ್ಯನ ಧ್ವನಿ!
“ಅರಸನು ಅವರಿಗೆ ಕಠಿಣವಾದ ಉತ್ತರವನ್ನು ಕೊಟ್ಟನು; ಅವನು ಹಿರಿಯರ ಆಲೋಚನೆಯನ್ನು ನಿರಾಕರಿಸಿದನು.” (1 ಅರಸು 12:13).
ಅರಸನಾದ ಸೊಲೊಮೋನನು ಮರಣಹೊಂದಿದ ನಂತರ, ಜನರು ಅವನ ಮಗನಾದ ರೆಹಬ್ಬಾಮನ ಬಳಿಗೆ ಬಂದು ಹೀಗೆ ಹೇಳಿದರು: “ನಿನ್ನ ತಂದೆಯು ನಮ್ಮ ಮೇಲೆ ಭಾರವಾದ ನೊಗವನ್ನು ಹೇರಿದನು; ನಿನ್ನ ತಂದೆಯು ನೇಮಿಸಿದ ಬಿಟ್ಟೀಕೆಲಸವನ್ನು ನೀನು ಕಡಿಮೆಮಾಡಿ ನಮ್ಮ ಮೇಲಿರುವ ಭಾರವಾದ ನೊಗವನ್ನು ಹಗುರ ಮಾಡುವಾದರೆ ನಾವು ನಿನ್ನನ್ನು ಸೇವಿಸುವೆವು.” (1 ಅರಸು 12:4).
ಆದರೆ, ರೆಹಬ್ಬಾಮನು ಹಿರಿಯರ ಆಲೋಚನೆಯನ್ನು ನಿರಾಕರಿಸಿ, ಬದಲಾಗಿ ಅನುಭವವಿಲ್ಲದ ಯುವಕರ ಸಲಹೆಯನ್ನು ಕೇಳಿದನು. ಅವನು ಜನರಿಗೆ ಕೊಟ್ಟ ಕಠಿಣವಾದ ಉತ್ತರದ ಕಾರಣದಿಂದಾಗಿ, ಇಸ್ರಾಯೇಲಿನ ಹನ್ನೆರಡು ಗೋತ್ರಗಳಲ್ಲಿ ಹತ್ತು ಗೋತ್ರಗಳು ಅವನಿಗೆ ವಿರುದ್ಧವಾಗಿ ದಂಗೆಯೆದ್ದು ಆತನಿಂದ ಬೇರ್ಪಟ್ಟವು. ಭೌತಿಕ ಆಲೋಚನೆಯು ಹೆಚ್ಚಾಗಿ ವಿಭಜನೆ ಮತ್ತು ವಿನಾಶಕ್ಕೆ ನಡೆಸುತ್ತದೆ.
ದೇವರ ಸೇವಕರು ಪ್ರಾರ್ಥಿಸಿ ಜ್ಞಾನದ ಆಲೋಚನೆಯನ್ನು ನೀಡುತ್ತಾರೆ. ದೇವಭಯಭಕ್ತಿವುಳ್ಳ ತಂದೆತಾಯಿಗಳು ತಮ್ಮ ಮಕ್ಕಳಿಗೆ ಜಯಶಾಲಿ ಜೀವನದ ರಹಸ್ಯಗಳನ್ನು ಕಲಿಸುತ್ತಾರೆ. ಆದ್ದರಿಂದ, ದೇವರ ಮಕ್ಕಳು ಉತ್ತಮವಾದ ಸಲಹೆಯನ್ನು ಆಲಿಸಿ ಅದರಂತೆ ನಡೆಯಬೇಕು. ಆತ್ಮೀಕ ವಿವೇಚನೆಯ ಮೂಲಕ ಅವರು ಸರಿಯಾದ ಮಾರ್ಗವನ್ನು ಗುರುತಿಸಲು ಕಲಿಯಬೇಕು.
ಕೆಲವೊಮ್ಮೆ, ಮಾನವ ಧ್ವನಿಗಳು ಒಂದಕ್ಕೊಂದು ಸಂಘರ್ಷಕ್ಕೆ ಒಳಗಾಗಬಹುದು. ಅಬ್ರಹಾಮನ ಜೀವನವನ್ನು ಗಮನಿಸಿರಿ. ಇಸಾಕನು ಹುಟ್ಟಿದ ನಂತರ, ಇಷ್ಮಾಯೇಲನು ಅವನನ್ನು ಪರಿಹಾಸ್ಯ ಮಾಡುತ್ತಿರುವುದನ್ನು ಸಾರಳು ಕಂಡು ಹೀಗೆ ಹೇಳಿದಳು: “ಈ ದಾಸಿಯನ್ನೂ ಅವಳ ಮಗನನ್ನೂ ಹೊರಗೆ ಹಾಕು; ಈ ದಾಸಿಯ ಮಗನು ನನ್ನ ಮಗನಾದ ಇಸಾಕನೊಂದಿಗೆ ಬಾಧ್ಯನಾಗಬಾರದು.” (ಆದಿ 21:10).
ಇಷ್ಮಾಯೇಲನು ತನ್ನ ಮಗನಾಗಿದ್ದರಿಂದ ಈ ವಿಷಯವು ಅಬ್ರಹಾಮನಿಗೆ ಬಹಳ ದುಃಖವನ್ನುಂಟುಮಾಡಿತು. ಒಂದು ಕಡೆ ಸಾರಳ ಧ್ವನಿ; ಮತ್ತೊಂದು ಕಡೆ ಚೊಚ್ಚಲ ಮಗನ ಮೇಲಿದ್ದ ತಂದೆಯ ವಾತ್ಸಲ್ಯದ ಧ್ವನಿ. ಅಬ್ರಹಾಮನು ಇಷ್ಮಾಯೇಲನನ್ನು ಪ್ರೀತಿಸುತ್ತಿದ್ದನು ಮತ್ತು ಅವನನ್ನು ಕಳುಹಿಸಿಬಿಡುವುದು ತುಂಬಾ ವೇದನೆಯ ಸಂಗತಿಯಾಗಿತ್ತು. ಯಾವ ನಿರ್ಧಾರವನ್ನು ತೆಗೆದುಕೊಳ್ಳಬೇಕು ಅಥವಾ ಯಾರ ಧ್ವನಿಗೆ ಕಿವಿಗೊಡಬೇಕು ಎಂದು ತಿಳಿಯದೆ, ಅಬ್ರಹಾಮನು ದೇವರ ಸನ್ನಿಧಿಗೆ ಹೋದನು. ಕರ್ತನು ಅವನಿಗೆ, “ಸಾರಳು ನಿನಗೆ ಹೇಳಿದ್ದನ್ನೆಲ್ಲಾ ಕೇಳು” ಎಂದು ಹೇಳಿದಾಗ, ಅವನು ಅದಕ್ಕೆ ವಿಧೇಯನಾಗಿ ಹಾಗರಳನ್ನೂ ಇಷ್ಮಾಯೇಲನನ್ನೂ ಕಳುಹಿಸಿಬಿಟ್ಟನು.
ಅದೇ ಸಮಯದಲ್ಲಿ, ಸಂಗಾತಿಯ ಆಲೋಚನೆಯನ್ನು ಹಾಗೆಯೇ ಕುರುಡಾಗಿ ಅನುಸರಿಸಲು ಸಾಧ್ಯವಿಲ್ಲದ ಸಂದರ್ಭಗಳೂ ಇರುತ್ತವೆ. ಯೋಬನ ಕಷ್ಟದ ಸಮಯದಲ್ಲಿ ಅವನ ಹೆಂಡತಿ ಅವನಿಗೆ, “ನಿನ್ನ ಯಥಾರ್ಥತ್ವವನ್ನು ಇನ್ನೂ ಬಿಡಲಿಲ್ಲವೋ? ದೇವರನ್ನು ದೂಷಿಸಿ ಸಾಯಿ ಎಂದು ಹೇಳಿದಳು.” (ಯೋಬ 2:9). ಯೋಬನು ಇಂತಹ ಮಾತುಗಳನ್ನು ಹೇಗೆ ತಾನೇ ಕೇಳಲು ಸಾಧ್ಯ? ಬದಲಾಗಿ, ಅವನು ಅವಳನ್ನು ಗದರಿಸಿದನು.
ಪ್ರಿಯ ದೇವರ ಮಕ್ಕಳೇ, ಯಾವ ನಿರ್ಧಾರವನ್ನು ತೆಗೆದುಕೊಳ್ಳಬೇಕೆಂದು ನಿಮಗೆ ಸಂದೇಹವಿರುವಾಗಲೆಲ್ಲಾ, ಕರ್ತನ ಸನ್ನಿಧಿಗೆ ಹೋಗಿರಿ. ಆತನ ಆಲೋಚನೆಯ ಧ್ವನಿಯನ್ನು ಕೇಳಲು ಪ್ರಾರ್ಥನಾಪೂರ್ವಕವಾಗಿ ಕಾಯಿರಿ. ಆತನು ನಿಮಗೆ ಬೋಧಿಸಿ, ನೀವು ನಡೆಯಬೇಕಾದ ಮಾರ್ಗವನ್ನು ತೋರಿಸಿಕೊಡುವನು.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ನೀವು ನಿಮ್ಮ ದೇವರಾದ ಯೆಹೋವನ ಮಾತನ್ನು ಶ್ರದ್ಧೆಯಿಂದ ಕೇಳಿ ನಾನು ಈಗ ನಿಮಗೆ ಬೋಧಿಸುವ ಆತನ ಆಜ್ಞೆಗಳನ್ನೆಲ್ಲಾ ಅನುಸರಿಸಿ ನಡೆದರೆ ಆತನು ಭೂಮಿಯ ಮೇಲಿರುವ ಎಲ್ಲಾ ಜನಾಂಗಗಳಿಂತಲೂ ನಿಮ್ಮನ್ನು ಉನ್ನತಸ್ಥಿತಿಗೆ ತರುವನು.” (ಧರ್ಮೋ 28:1).