ಆಗಸ್ಟ್ 21 – ತೂತು ಬಿದ್ದ ಚೀಲ!
“ನೀವು ಬಿತ್ತಿದ ಬೀಜವು ಬಹಳ, ತಂದ ಫಲವು ಸ್ವಲ್ಪ. ತಿನ್ನುತ್ತೀರಿ, ತೃಪ್ತಿಯಾಗದು, ಕುಡಿಯುತ್ತೀರಿ, ಆನಂದವಾಗದು; ಹೊದಿಯುತ್ತೀರಿ, ಬೆಚ್ಚಗಾಗದು; ಸಂಬಳಗಾರನು ಸಂಬಳಹಾಕುವ ಚೀಲವು ತೂತಿನದು” (ಹಗ್ಗಾ 1:6)
ಪ್ರವಾದಿಯಾದ ಹಗ್ಗಾಯನ ಮೂಲಕ ಕರ್ತನು ಹಲವು ಗುಂಪಿನ ಜನರನ್ನು ನಮ್ಮ ಕಣ್ಣಮುಂದೆ ತರುತ್ತಾನೆ.
ಮೊದಲನೆಯದಾಗಿ, ಅವನು ಒಬ್ಬ ರೈತನ ಕುರಿತು ಮಾತನಾಡುತ್ತಾನೆ. ಅವನು ಸಮೃದ್ಧಿಯಾಗಿ ಬಿತ್ತಿದರೂ, ಕೊಯ್ಯುವುದು ಮಾತ್ರ ಬಹಳ ಕಡಿಮೆ. ಇತರರ ಹೊಲಗಳು ಮೂವತ್ತರಷ್ಟಾಗಿ, ಆರವತ್ತರಷ್ಟಾಗಿ ಅಥವಾ ನೂರರಷ್ಟಾಗಿ ಫಲಕೊಡುವಾಗ, ಇವನ ಹೊಲ ಮಾತ್ರ ಏಕೆ ಫಲಕೊಡುತ್ತಿಲ್ಲ? ಇವನ ಚೀಲಕ್ಕೆ ಏಕೆ ತೂತು ಬಿದ್ದಿದೆ?
ತರುವಾಯ, ಹಗ್ಗಾಯನು ಇನ್ನೊಂದು ಗುಂಪಿನ ಜನರನ್ನು ತೋರಿಸುತ್ತಾನೆ. ಅವರ ಬಳಿ ಯಥೇಷ್ಟವಾಗಿ ಆಹಾರವಿದೆ, ಆದರೂ ಎಷ್ಟು ತಿಂದರೂ ಅವರಿಗೆ ತೃಪ್ತಿಯೇ ಇಲ್ಲ. ಆರದ ಹಸಿವು ಅವರನ್ನು ಸದಾ ಕಾಡುತ್ತಿರುವಂತಿದೆ. ಅವರ ಆತ್ಮಕ್ಕೆ ಶಾಂತಿಯಾಗಲಿ, ಸಂತೃಪ್ತಿಯಾಗಲಿ ಇಲ್ಲ. ಅವರ ಬಳಿಯೂ ತೂತು ಬಿದ್ದ ಚೀಲವೇ ಇದೆ.
ನಂತರ ಅವನು ಮತ್ತೊಂದು ಗುಂಪನ್ನು ನಮ್ಮ ಮುಂದೆ ತರುತ್ತಾನೆ. ಅವರು ಎಷ್ಟೇ ಬಟ್ಟೆಗಳನ್ನು ಧರಿಸಿಕೊಂಡರೂ, ಬೆಚ್ಚಗಿನ ಹೊದಿಕೆಗಳನ್ನು ಹೊದ್ದುಕೊಂಡರೂ ಅವರಿಗೆ ಬೆಚ್ಚಗೆ ಎನಿಸುವುದೇ ಇಲ್ಲ. ಅವರ ದೇಹ ನಡುಗುತ್ತಲೇ ಇರುತ್ತದೆ. ಇದು ಕೂಡ ಇನ್ನೊಂದು ರೀತಿಯ ತೂತು ಬಿದ್ದ ಚೀಲವೇ.
ಪ್ರವಾದಿಯಾದ ಹಗ್ಗಾಯನು ಇದಕ್ಕೆ ಕಾರಣವನ್ನು ವಿವರಿಸುತ್ತಾನೆ: “ಈ ಆಲಯವು ಹಾಳುಬಿದ್ದಿದೆಯಲ್ಲಾ; ನೀವು ಒಳಗೋಡೆಗೆಲ್ಲಾ ಹಲಿಗೆಹೊದಿಸಿಕೊಂಡ ಸ್ವಂತ ಮನೆಗಳಲ್ಲಿ ವಾಸಿಸುವದಕ್ಕೆ ಈ ಸಮಯವು ತಕ್ಕದ್ದೋ?” (ಹಗ್ಗಾ1:4)
ಅವರ ಸ್ವಂತ ಆದ್ಯತೆಗಳೇ ಅವರ ಚೀಲಗಳಿಗೆ ತೂತುಗಳನ್ನು ಉಂಟುಮಾಡಿದವು. ಸಂಪತ್ತು ತೂತು ಬಿದ್ದ ಚೀಲದಲ್ಲಿ ಉಳಿಯಲಾರದು. ಹರಿದ ಬಲೆಯಲ್ಲಿ ಮೀನು ನಿಲ್ಲಲಾರದು. ಹಾಳಾಗಿ ಬಿದ್ದಿರುವ ಬಲಿಪೀಠದ ಮೇಲೆ ಬೆಂಕಿ ಇಳಿದು ಬರಲಾರದು. ಕರ್ತನ ಆಲಯವನ್ನು ನಿರ್ಲಕ್ಷಿಸುವವರು ಆತನ ಪೂರ್ಣ ಆಶೀರ್ವಾದವನ್ನು ನಿರೀಕ್ಷಿಸಲು ಸಾಧ್ಯವಿಲ್ಲ.
ನೀವು ಕರ್ತನನ್ನು ಸನ್ಮಾನಿಸುವಾಗ, ಆತನು ನಿಮ್ಮನ್ನು ಸನ್ಮಾನಿಸುವನು. ನೀವು ಆತನಿಗೆ ಪ್ರಥಮ ಸ್ಥಾನವನ್ನು ನೀಡಿದಾಗ, ಆತನು ನಿಮ್ಮನ್ನು ಎತ್ತಿ ಉನ್ನತ ಗೌರವದ ಸ್ಥಾನದಲ್ಲಿ ನೆಲೆಗೊಳಿಸುವನು. ನೀವು ನಿಮ್ಮ ದಶಮಾಂಶಗಳನ್ನು ಕರ್ತನ ಆಲಯಕ್ಕೆ ನಂಬಿಗಸ್ತಿಕೆಯಿಂದ ತಂದಾಗ, ಆತನು ಪರಲೋಕದ ದ್ವಾರಗಳನ್ನು ತೆರೆದು ಸ್ಥಳ ಹಿಡಿಯಲಾರದಷ್ಟು ಆಶೀರ್ವಾದಗಳನ್ನು ನಿಮ್ಮ ಮೇಲೆ ಸುರಿಸುವೆನೆಂದು ವಾಗ್ದಾನ ಮಾಡುತ್ತಾನೆ (ಮಲಾಕಿ 3:10).
ದೇವರ ವಾಕ್ಯವು ಹೀಗೆ ಘೋಷಿಸುತ್ತದೆ: “ನಿನ್ನ ಆದಾಯದಿಂದಲೂ ಬೆಳೆಯ ಪ್ರಥಮಫಲದಿಂದಲೂ ಯೆಹೋವನನ್ನು ಸನ್ಮಾನಿಸು. ಹೀಗೆ ಮಾಡಿದರೆ ನಿನ್ನ ಕಣಜಗಳು ಸಮೃದ್ಧಿಯಿಂದ ತುಂಬುವವು, ತೊಟ್ಟಿಗಳಲ್ಲಿ ದ್ರಾಕ್ಷಾರಸವು ತುಂಬಿತುಳುಕುವದು.” (ಜ್ಞಾನೋ 3:9–10)
ಪ್ರೀತಿಯ ದೇವರ ಮಕ್ಕಳೇ, “ಕರ್ತನಿಗೆ ಪ್ರಥಮ ಸ್ಥಾನ.” ಎಂಬ ಈ ಮಾತುಗಳನ್ನು ನಿಮ್ಮ ಹೃದಯವೆಂಬ ಹಲಗೆಯ ಮೇಲೆ ಗಟ್ಟಿಯಾಗಿ ಕೆತ್ತಿಕೊಳ್ಳಿರಿ: ನೀವು ಆತನನ್ನು ಪ್ರಾಮಾಣಿಕವಾಗಿ ಪ್ರೀತಿಸುವಾಗ, ಆತನು ನಿಮಗೆ ವಹಿಸಿಕೊಟ್ಟಿರುವ ಎಲ್ಲದರಲ್ಲೂ ಮೊದಲ ಭಾಗವನ್ನು ಆತನಿಗೆ ಸಂತೋಷದಿಂದ ಕೊಡುವಿರಾ? ಈ ರೀತಿಯಾಗಿ ನೀವು ಆತನ ಹೃದಯವನ್ನು ಸಂತಸಗೊಳಿಸಿದಾಗ, ಆತನು ನಿಮ್ಮ ಹೃದಯವನ್ನು ಸಂತೋಷಪಡಿಸುವನು. ಆತನು ತನ್ನ ಪ್ರಭಾವದ ಐಶ್ವರ್ಯಕ್ಕೆ ತಕ್ಕಂತೆ ನಿಮ್ಮ ಎಲ್ಲಾ ಅಗತ್ಯಗಳನ್ನು ಪೂರೈಸುವನು, ಮತ್ತು ನಿಮ್ಮ ಪಾತ್ರೆಯು ಆತನ ಆಶೀರ್ವಾದಗಳಿಂದ ನಿರಂತರವಾಗಿ ತುಂಬಿ ತುಳುಕುವುದು.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಹೀಗಿರುವದರಿಂದ, ನೀವು ಮೊದಲು ದೇವರ ರಾಜ್ಯಕ್ಕಾಗಿಯೂ ನೀತಿಗಾಗಿಯೂ ತವಕಪಡಿರಿ. ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.” (ಮತ್ತಾ 6:33)