Appam, Appam - Kannada

ಸೆಪ್ಟೆಂಬರ್ 04 – ಆತನು ಎಲ್ಲಿಗೆ ಹೋದರೂ!

“ಯಜ್ಞದ ಕುರಿಯಾದಾತನು ಎಲ್ಲಿ ಹೋದರೂ ಇವರು ಆತನ ಹಿಂದೆ ಹೋಗುವರು.” (ಪ್ರಕ 14:4)

ಅಪೋಸ್ತಲನಾದ ಯೋಹಾನನು ಆತ್ಮದಲ್ಲಿದ್ದು ಪರಲೋಕ ರಾಜ್ಯದ ಚೀಯೋನ್ ಪರ್ವತದ ಕಡೆಗೆ ನೋಡಿದಾಗ, 144,000 ಮಂದಿ ಅಲ್ಲಿ ನಿಂತಿರುವುದನ್ನು ಕಂಡನು; ಅವರ ಹಣೆಯ ಮೇಲೆ ತಂದೆಯ ಹೆಸರು ಬರೆಯಲ್ಪಟ್ಟಿತ್ತು.

“ಕುರಿಮರಿಯಾದವನು ಎಲ್ಲಿಗೆ ಹೋದರೂ ಆತನನ್ನು ಹಿಂಬಾಲಿಸುವವರು ಇವರೇ.” ಹೌದು, ಅವರ ಹೆಜ್ಜೆಗಳಲ್ಲಿ ಬಲವಾದ ನಿಶ್ಚಯವಿತ್ತು—ಎಲ್ಲಾ ಸಮಯದಲ್ಲೂ, ಎಲ್ಲಾ ಪರಿಸ್ಥಿತಿಗಳಲ್ಲೂ ಕುರಿಮರಿಯಾದವನನ್ನು ಹಿಂಬಾಲಿಸುವ ದೃಢಸಂಕಲ್ಪವನ್ನು ಮಾಡಿದ್ದರು. ಆತನ ಹೆಜ್ಜೆಗುರುತುಗಳನ್ನು ಹಿಂಬಾಲಿಸುವವರು ಲೋಕದ ದೃಷ್ಟಿಯಲ್ಲಿ ಮೂಢರಂತೆ ಕಂಡರೂ ಎಂದಿಗೂ ದಾರಿ ತಪ್ಪುವುದಿಲ್ಲ.

ನಿಮ್ಮ ಕಾಲುಗಳನ್ನು ದೇವರಿಗೆ ಸಮರ್ಪಿಸಿರಿ. ಕ್ರಿಸ್ತನಲ್ಲಿ ನಿಮ್ಮ ಹೆಜ್ಜೆಗಳನ್ನು ಸ್ಥಿರಪಡಿಸಿರಿ. ಯೇಸು ಕ್ರಿಸ್ತನು ಈ ಭೂಮಿಯ ಮೇಲೆ ಬಾಳಿ ಬದುಕಿ, ಪರಿಶುದ್ಧತೆಯ ಮಾರ್ಗಕ್ಕೆ ಮಾರ್ಗದರ್ಶಕನಾದನು. ಸತ್ಯವೇದವು ಹೀಗೆ ಹೇಳುತ್ತದೆ: “ಇದಕ್ಕಾಗಿಯೇ ನೀವು ಕರೆಯಲ್ಪಟ್ಟಿರಿ; ಯಾಕಂದರೆ ಕ್ರಿಸ್ತನು ಸಹ ನಿಮಗೋಸ್ಕರ ಶ್ರಮೆಪಟ್ಟು, ನೀವು ತನ್ನ ಹೆಜ್ಜೆಗಳನ್ನು ಹಿಂಬಾಲಿಸಬೇಕೆಂದು ನಿಮಗೆ ಮಾದರಿಯನ್ನು ಇಟ್ಟುಹೋದನು.” (1 ಪೇತ್ರ 2:21)

ಒಮ್ಮೆ ಸಹೋದರಿಯೊಬ್ಬಳು ಉಪವಾಸ ಮಾಡಿ, “ಕರ್ತನೇ, ನಾನು ಸಾಧು ಸುಂದರ್ ಸಿಂಗ್ ಅವರನ್ನು ನೋಡಲು ಬಯಸುತ್ತೇನೆ” ಎಂದು ಪ್ರಾರ್ಥಿಸಿದಳು. ಕರ್ತನು ಅವಳಿಗೆ ಒಂದು ದರ್ಶನವನ್ನು ನೀಡಿದನು. ಆ ದರ್ಶನದಲ್ಲಿ, ದೇವರ ಕುರಿಮರಿಯಾದ ಯೇಸು ಕ್ರಿಸ್ತನು ಮುಂದೆ ನಡೆಯುತ್ತಿರುವುದನ್ನೂ, ಸಾಧು ಸುಂದರ್ ಸಿಂಗ್ ಆತನನ್ನು ಹಿಂಬಾಲಿಸುತ್ತಿರುವುದನ್ನೂ ಅವಳು ಕಂಡಳು. ಎಂತಹ ಅದ್ಭುತ ದೃಶ್ಯ! ಯೇಸು ತನ್ನ ಪಾದಗಳನ್ನು ಎಲ್ಲಿ ಇರಿಸಿದನೋ, ಸಾಧು ಸುಂದರ್ ಸಿಂಗ್ ತನ್ನ ಪಾದಗಳನ್ನು ಸರಿಯಾಗಿ ಅದೇ ಸ್ಥಳದಲ್ಲಿ ಇಟ್ಟು, ಯೇಸು ಸಾಗಿದ ಮಾರ್ಗದಲ್ಲೇ ಆತನ ಹೆಜ್ಜೆಜಾಡಿನಲ್ಲಿ ನಡೆದರು. ಸಾಧು ಸುಂದರ್ ಸಿಂಗ್ ಅವರು ಕಾಲಿಗೆ ಕೆರಗಳನ್ನು ಸಹ ಮೆಟ್ಟದೆ ಬರಿಗಾಲಿನಲ್ಲಿ ನಡೆಯುವಷ್ಟರ ಮಟ್ಟಿಗೆ ಕ್ರಿಸ್ತನನ್ನು ಹಿಂಬಾಲಿಸುವುದನ್ನೇ ತಮ್ಮ ಜೀವನದ ಗುರಿಯಾಗಿಸಿಕೊಂಡಿದ್ದರು.

ಕ್ರಿಸ್ತನು ತಂದೆಯ ಚಿತ್ತವನ್ನು ಸಂಪೂರ್ಣವಾಗಿ ನೆರವೇರಿಸಿದಂತೆಯೇ, ನಾವು ಸಹ ಪೂರ್ಣಹೃದಯದಿಂದ ಆತನ ಚಿತ್ತವನ್ನು ನೆರವೇರಿಸಲು ಬಯಸಿದಾಗ ಕ್ರಿಸ್ತನ ಹೆಜ್ಜೆಗುರುತುಗಳನ್ನು ಹಿಂಬಾಲಿಸುವವರಾಗುತ್ತೇವೆ. ಆ ಹೆಜ್ಜೆಗುರುತುಗಳು ನಮ್ಮನ್ನು ಪರಿಶುದ್ಧತೆಯ ಕಡೆಗೆ ಮತ್ತು ಅಂತಿಮವಾಗಿ ಪರಲೋಕದ ಕಡೆಗೆ ನಡೆಸುತ್ತವೆ.

ಆದ್ದರಿಂದ, ನಿಮ್ಮನ್ನು ನೀವೇ ಜಾಗರೂಕತೆಯಿಂದ ಪರೀಕ್ಷಿಸಿಕೊಳ್ಳಿರಿ. ನಾನು ಹೇಳುತ್ತಿರುವುದು ಸರಿಯೇ? ಕ್ರಿಸ್ತನು ಈ ಪರಿಸ್ಥಿತಿಯಲ್ಲಿದ್ದರೆ ಏನು ಹೇಳುತ್ತಿದ್ದನು? ನನ್ನ ಮಾರ್ಗಗಳು ಆತನ ಮಾರ್ಗಗಳಿಗೆ ಅನುಗುಣವಾಗಿವೆಯೇ? ಈ ಪ್ರಶ್ನೆಗಳು ನಿಮ್ಮನ್ನು ಪ್ರಾಮಾಣಿಕ ಸ್ವಯಂ ಪರೀಕ್ಷೆಗೆ ಕೊಂಡೊಯ್ಯಲಿ.

ಕ್ರಿಸ್ತನು ಸತ್ಯವೇದದ ಪ್ರಕಾರ ನಡೆದನು. ಸತ್ಯವೇದವು ನೆರವೇರುವಂತೆ ಆತನು ತನ್ನನ್ನೇ ಒಪ್ಪಿಸಿಕೊಟ್ಟನು. ಸತ್ಯವೇದವು ಆತನ ಪಾದಗಳಿಗೆ ದೀಪವೂ ಆತನ ದಾರಿಗೆ ಬೆಳಕೂ ಆಗಿತ್ತು. ಯೇಸು ಕ್ರಿಸ್ತನೇ ಮಾರ್ಗವೂ ಸತ್ಯವೂ ಜೀವವೂ ಆಗಿದ್ದಾನೆ (ಯೋಹಾ 14:6).

ಯೇಸು ಹೀಗೆ ಹೇಳಿದನು: “ನಾನೇ ಆ ಬಾಗಲು. ನನ್ನ ಮುಖಾಂತರವಾಗಿ ಯಾವನಾದರೂ ಒಳಗೆ ಹೋದರೆ ಸುರಕ್ಷಿತವಾಗಿದ್ದು ಹೋಗುವನು, ಹೊರಗೆ ಬರುವನು, ಮೇವನ್ನು ಕಂಡುಕೊಳ್ಳುವನು.” (ಯೋಹಾ 10:9)

ಪ್ರೀತಿಯ ದೇವರ ಮಕ್ಕಳೇ, ನೀವು ಕ್ರಿಸ್ತನ ಹೆಜ್ಜೆಗುರುತುಗಳನ್ನು ಹಿಂಬಾಲಿಸಲು ಬಯಸಿದರೆ, ದೇವರ ವಾಕ್ಯವನ್ನು ಹಿಂಬಾಲಿಸಿರಿ. ಆತನ ಮಾತುಗಳಿಗೆ ವಿಧೇಯರಾಗಿರಿ. ಕ್ರಿಸ್ತನನ್ನು ಮಾತ್ರ ಮೆಚ್ಚಿಸಲು ಜೀವಿಸುತ್ತೇನೆ ಎಂಬ ದೃಢ ನಿರ್ಧಾರವನ್ನು ಮಾಡಿರಿ.

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ನಾನು ಕ್ರಿಸ್ತನನ್ನು ಅನುಸರಿಸುವಂತೆಯೇ ನೀವು ನನ್ನನ್ನು ಅನುಸರಿಸುವವರಾಗಿರಿ.” (1 ಕೊರಿಂಥ 11:1)

Leave A Comment

Your Comment
All comments are held for moderation.