ಆಗಸ್ಟ್ 01 – ನೂತನ ತಿಂಗಳು!
“ಈ ದಿನವು ಯೆಹೋವನಿಂದಲೇ ನೇಮಕವಾದದ್ದು; ಇದರಲ್ಲಿ ನಾವು ಉಲ್ಲಾಸದಿಂದ ಆನಂದಿಸೋಣ. ಯೆಹೋವನೇ ದಯವಿಟ್ಟು ರಕ್ಷಿಸು; ಯೆಹೋವನೇ, ದಯವಿಟ್ಟು ಸಾಫಲ್ಯಕೊಡು” ಕೀರ್ತನೆ 118:24–25
ಕರ್ತನು ತನ್ನ ಕೃಪೆಯಿಂದ ಈ ವರ್ಷದ ಮೊದಲ ಏಳು ತಿಂಗಳುಗಳನ್ನು ಕ್ಷೇಮವಾಗಿ ನಡೆಸಿ, ಆಗಸ್ಟ್ ತಿಂಗಳ ಮೊದಲ ದಿನವನ್ನು ನೋಡುವಂತೆ ನಮಗೆ ಅನುಗ್ರಹಿಸಿದ್ದಾನೆ. ಕೀರ್ತನೆಗಾರನು, “ಈ ದಿನವು ಯೆಹೋವನಿಂದಲೇ ನೇಮಕವಾದದ್ದು; ಇದರಲ್ಲಿ ನಾವು ಉಲ್ಲಾಸದಿಂದ ಆನಂದಿಸೋಣ” ಎಂದು ತಿಳಿಸುತ್ತಿದ್ದಾನೆ. ಈ ತಿಂಗಳು ನೀವು ದೇವರ ಸಾನ್ನಿಧ್ಯದಿಂದ ತುಂಬಿ, ಆತನ ಒಳ್ಳೇಯತನದಲ್ಲಿ ಸಂತೋಷಿಸುತ್ತಾ, ಜಯದಿಂದ ಜಯಕ್ಕೆ ಮುನ್ನಡೆಯುವ ತಿಂಗಳಾಗಲಿ.
ನಿಮ್ಮ ಸಮಯಗಳು ಕರ್ತನ ಕೈಯಲ್ಲಿವೆ. ಪ್ರತಿಯೊಂದು ದಿನವನ್ನೂ ಆತನ ಆರೈಕೆಗೆ ಒಪ್ಪಿಸಿ, “ಕರ್ತನೇ, ನಿನ್ನ ಸಾನ್ನಿಧ್ಯವು ನನ್ನ ಮುಂದೆ ಹೋಗಲಿ. ನಿನ್ನ ಪ್ರೀತಿಯಲ್ಲಿ ನನ್ನನ್ನು ನಡೆಸು” ಎಂದು ಪ್ರಾರ್ಥಿಸಿರಿ. ನಿಮ್ಮ ಭಾರಗಳನ್ನು ಮತ್ತು ಚಿಂತೆಗಳನ್ನು ಆತನ ಮೇಲೆ ಹಾಕಿ, ಆತನು ನಿಮ್ಮನ್ನು ಬಿಡುಗಡೆ ಮಾಡುತ್ತಾನೆಂದು ನಂಬಿದಾಗ, ಆತನು ಖಂಡಿತವಾಗಿಯೂ ನಿಮ್ಮ ಕೈಹಿಡಿದು ನಿಮ್ಮ ಪ್ರತಿಯೊಂದು ಹೆಜ್ಜೆಯನ್ನೂ ನಡೆಸುವನು.
“ಆದದರಿಂದ ನಾಳಿನ ವಿಷಯವಾಗಿ ಚಿಂತೆಮಾಡಬೇಡಿರಿ; ನಾಳಿನ ದಿನವು ತನ್ನದನ್ನು ತಾನೇ ಚಿಂತಿಸಿಕೊಳ್ಳುವದು. ಆ ಹೊತ್ತಿನ ಕಾಟ ಆ ಹೊತ್ತಿಗೆ ಸಾಕು.” ಮತ್ತಾ 6:34
ಪ್ರತಿಯೊಂದು ದಿನಕ್ಕೂ ತನ್ನದೇ ಆದ ಸೂರ್ಯೋದಯ ಮತ್ತು ಬೆಳಕಿರುವಂತೆಯೇ, ಕರ್ತನ ಕರುಣೆಯು ಪ್ರತಿ ಮುಂಜಾನೆಯು ಹೊಸದಾಗಿರುತ್ತದೆ.
“ನಾವು ಉಳಿದಿರುವದು ಯೆಹೋವನ ಕರುಣೆಯೇ; ಆತ ನ ಕೃಪಾವರಗಳು ನಿಂತುಹೋಗವು. ದಿನದಿನವು ಹೊಸಹೊಸದಾಗಿ ಒದಗುತ್ತದ; ನಿನ್ನ ಸತ್ಯಸಂಧತೆಯು ದೊಡ್ಡದು .” ಪ್ರಲಾಪ 3:22–23
ಪ್ರತಿಯೊಂದು ದಿನವನ್ನು ದೇವರೊಂದಿಗೆ ಪ್ರಾರಂಭಿಸಿ, ಮತ್ತು ಅವಕಾಶ ಸಿಕ್ಕಾಗಲೆಲ್ಲಾ ಆತನನ್ನು ಸ್ತುತಿಸಿರಿ. ಅರಸನಾದ ದಾವೀದನು ದಿನಕ್ಕೆ ಏಳು ಬಾರಿ ಕರ್ತನನ್ನು ಸ್ತುತಿಸುತ್ತಿದ್ದನು. ಆತನು ಹೀಗೆ ಸಾರಿದನು: “ನಾನು ಯಹೋವನನ್ನು ಯಾವಾಗಲೂ ನನ್ನೆದುರಿಗೇ ಇಟ್ಟುಕೊಂಡಿದ್ದೇನೆ; ಆತನು ನನ್ನ ಬಲಗಡೆಯಲ್ಲಿ ಇರುವದರಿಂದ ನಾನು ಎಂದಿಗೂ ಕದಲುವದಿಲ್ಲ.” (ಕೀರ್ತನೆ 16:8)
ಪ್ರತಿಯೊಂದು ದಿನದ ಸವಾಲುಗಳು, ಜವಾಬ್ದಾರಿಗಳು ಮತ್ತು ಹೋರಾಟಗಳು ನಿಮ್ಮ ಜೀವನವೆಂಬ ರಥವನ್ನು ಬೇರೆ ಬೇರೆ ದಿಕ್ಕುಗಳಲ್ಲಿ ಎಳೆಯುವ ಕುದುರೆಗಳಂತೆ ಕಾಣಿಸಬಹುದು. ಆದಾಗ್ಯೂ, ಆ ಲಗಾಮನ್ನು ಹಿಡಿದು ನಿಮ್ಮ ಪ್ರಯಾಣವನ್ನು ನಿರ್ದೇಶಿಸುವವನು ಕರ್ತನೇ. ಆತನು ಈ ಇಡೀ ತಿಂಗಳು ನಿಮ್ಮನ್ನು ಸುರಕ್ಷಿತವಾಗಿ ನಡೆಸಿ, ತನ್ನ ರಕ್ಷಣೆಯಿಂದ ನಿಮ್ಮನ್ನು ಆವರಿಸಿ, ಪ್ರಾರ್ಥನೆಯ ಮೂಲಕ ನಿಮ್ಮನ್ನು ಬಲಪಡಿಸಲಿ.
ಸತ್ಯವೇದವು ಹೀಗೆ ಹೇಳುತ್ತದೆ “ಆದದರಿಂದ ನಿಮ್ಮ ದೇವರಾದ ಯೆಹೋವನು ತಾನೆ ವಿರೋಧಿಗಳನ್ನು ದಹಿಸುವ ಬೆಂಕಿಯೋಪಾದಿಯಲ್ಲಿ ನಿಮ್ಮ ಮುಂದೆ ಹೋಗುತ್ತಾನೆಂದು ಈಗ ತಿಳಿದುಕೊಳ್ಳಿರಿ.ಆತನೇ ಅವರನ್ನು ನಿಮ್ಮ ಮುಂದೆ ಸೋತುಹೋಗುವಂತೆ ಮಾಡುವನು. ” ಧರ್ಮೋ 9:3
ಈ ಹೊಸ ತಿಂಗಳು ಪ್ರಾರಂಭವಾಗುತ್ತಿದ್ದಂತೆ, ನಿಮ್ಮನ್ನು ಸಂಪೂರ್ಣವಾಗಿ ದೇವರ ಚಿತ್ತಕ್ಕೆ ಸಮರ್ಪಿಸಿಕೊಳ್ಳಿರಿ. ನೀವು ಆತನ ದೈವಿಕ ಉದ್ದೇಶದೊಳಗೆ ನಡೆಯುತ್ತಿದ್ದೀರಾ ಎಂಬುದನ್ನು ನಿರಂತರವಾಗಿ ಪರೀಕ್ಷಿಸಿಕೊಳ್ಳಿರಿ.
ನಿಮ್ಮ ಜೀವನಕ್ಕಾಗಿ ಕರ್ತನಿಗೆ ಒಂದು ನಿತ್ಯವಾದ ಉದ್ದೇಶ, ಪರಿಪೂರ್ಣವಾದ ಯೋಜನೆ ಮತ್ತು ಖಚಿತವಾದ ಕರೆಯಿದೆ. ನಿಮ್ಮನ್ನು ತನ್ನ ಮಗನ ಸ್ವರೂಪಕ್ಕೆ ಹೋಲುವಂತೆ ಮಾಡುವುದೇ ಆತನ ಆಶಯವಾಗಿದೆ. “ಯಾರನ್ನು ಆತನು ಮುನ್ನವೇ ತಿಳಿದುಕೊಂಡನೋ, ಅವರನ್ನು ತನ್ನ ಮಗನ ಸ್ವರೂಪಕ್ಕೆ ಹೋಲುವಂತೆ ಮುಂಚಿತವಾಗಿಯೇ ನೇಮಿಸಿದನು.” (ರೋಮಾ 8:29)
ಕರ್ತನು ಯಾವಾಗಲೂ ನಿಮ್ಮ ಒಳಿತಿಗಾಗಿಯೇ ಕೆಲಸ ಮಾಡುತ್ತಾನೆ. ಜನರು ನಿಮಗೆ ಕೇಡು ಮಾಡಲು ನೆನೆಸಬಹುದು, ಆದರೆ ದೇವರು ಪ್ರತಿಯೊಂದು ಕೇಡನ್ನೂ ಮೇಲನನ್ನಾಗಿ ಮಾರ್ಪಡಿಸಿ ನಿಮ್ಮ ಜೀವನಕ್ಕೆ ಆಶೀರ್ವಾದವನ್ನು ತರಲು ಶಕ್ತನಾಗಿದ್ದಾನೆ.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಇದಲ್ಲದೆ ದೇವರ ಸಂಕಲ್ಪದ ಮೇರೆಗೆ ಕರೆಯಲ್ಪಟ್ಟು ಆತನನ್ನು ಪ್ರೀತಿಸುವವರ ಹಿತಕ್ಕಾಗಿ ಎಲ್ಲಾ ಕಾರ್ಯಗಳು ಅನುಕೂಲವಾಗುತ್ತದೆ ಎಂದು ನಮಗೆ ಗೊತ್ತದೆ.” (ರೋಮಾ 8:28)