Appam, Appam - Kannada

ಜೂನ್ 17 – ಪವಿತ್ರಾತ್ಮನ ಪ್ರೇರೇಪಣೆ!

“ಅವನು ಚೋರ್ಗಕ್ಕೂ ಎಷ್ಟಾವೋಲಿಗೂ ಮಧ್ಯದಲ್ಲಿರುವ ದಾನ್‌ಕುಲದ ಪಾಳೆಯದಲ್ಲಿದ್ದಾಗ ಆತ್ಮನು ಅವನನ್ನು ಪ್ರೇರೇಪಿಸಹತ್ತಿತು.” (ನ್ಯಾಯ 13:25)

ಇಸ್ರಾಯೇಲ್ಯರನ್ನು ಫಿಲಿಷ್ಟಿಯರ ದಾಸತ್ವದಿಂದ ಬಿಡಿಸಲು ಕರ್ತನು ಸಂಸೋನನನ್ನು ಒಂದು ವಿಶೇಷ ಸಾಧನವಾಗಿ ಆರಿಸಿಕೊಂಡನು. ಆದರೆ ಸಂಸೋನನು ತನ್ನ ಕರೆಯುವಿಕೆಯನ್ನು ಮತ್ತು ದೈವಿಕ ಆಯ್ಕೆಯನ್ನು ಗೌರವಿಸದೆ ನಿರ್ಲಕ್ಷ್ಯದಿಂದ ಜೀವಿಸಿದಾಗ, ಪವಿತ್ರಾತ್ಮನು ಸುಮ್ಮನೆ ಇರಲಿಲ್ಲ — ಆತನು ಅವನನ್ನು ಎಬ್ಬಿಸಲು ಮತ್ತು ಪ್ರೇರೇಪಿಸಲು ಪ್ರಾರಂಭಿಸಿದನು.

ಇಂದಿಗೂ ಸಹ, ಪವಿತ್ರಾತ್ಮನು ಕರ್ತನಿಗಾಗಿ ಶ್ರೇಷ್ಠ ಕಾರ್ಯಗಳನ್ನು ಮಾಡಲು ನಮ್ಮನ್ನು ಪ್ರೇರೇಪಿಸುತ್ತಲೇ ಇರುತ್ತಾನೆ. ನಿಮ್ಮ ಜೀವನದಲ್ಲಿ ಪವಿತ್ರಾತ್ಮನ ಪ್ರೇರೇಪಣೆಯನ್ನು ನೀವು ಅನುಭವಿಸಿದ್ದೀರಾ?

ಸತ್ಯವೇದವು ಹೇಳುತ್ತದೆ: “ಯಾರಾರು ದೇವರ ಆತ್ಮನಿಂದ ನಡಿಸಿಕೊಳ್ಳುತ್ತಾರೋ ಅವರು ದೇವರ ಮಕ್ಕಳು.” (ರೋಮ 8:14)

ನನ್ನ ಜೀವನದಲ್ಲಿ ವಿಶ್ವಾಸಿಗಳಿಗಾಗಿ ಮತ್ತು ದೇವರ ಸೇವಕರಿಗಾಗಿ ಪ್ರಾರ್ಥಿಸುವ ಭಾರವನ್ನು ನನಗೆ ದೇವರ ಆತ್ಮನು ನೀಡಿದನು. ಆತನು ಕೆಲವು ಮುಖಗಳನ್ನು ನನ್ನ ಮನಸ್ಸಿನ ಕಣ್ಣುಗಳ ಮುಂದೆ ತರುತ್ತಾನೆ. ಕೆಲವು ಹೆಸರುಗಳನ್ನು ನೆನಪಿಸುತ್ತಾನೆ. ಹಾಗೂ ಅವರಿಗಾಗಿ ಪ್ರಾರ್ಥಿಸಲು ನನ್ನನ್ನು ಪ್ರೇರೇಪಿಸುತ್ತಾನೆ. ಆ ಪ್ರೇರೇಪಣೆಯ ಮೂಲಕ ಪ್ರಾರ್ಥನೆಯ ಭಾರ ಮತ್ತು ಆತ್ಮಗಳ ಮೇಲಿನ ಭಾರವು ಉಂಟಾಗುತ್ತದೆ. ನಂತರ ನಾವು ಸರಿಯಾದ ಪದಗಳೊಂದಿಗೆ ಪ್ರಾರ್ಥಿಸುವಂತೆ ಆತನು ವಿಜ್ಞಾಪನೆಯ ಆತ್ಮವನ್ನು ಸಹ ದಯಪಾಲಿಸುತ್ತಾನೆ.

ಪವಿತ್ರಾತ್ಮನ ಪ್ರೇರೇಪಣೆಯಿಂದ ಸಭೆಗಳಲ್ಲಿ ವಿಶ್ವಾಸಿಗಳು ಶಕ್ತಿಯುತವಾಗಿ ಪ್ರಾರ್ಥಿಸುವುದನ್ನು ಮತ್ತು ಇಡೀ ಸಭೆಯು ಆತ್ಮನಿಂದ ತುಂಬಿಕೊಳ್ಳುವುದನ್ನು ನಾನು ನೋಡಿದ್ದೇನೆ. ದೇವರ ಅಭಿಷೇಕವು ವಿಶ್ವಾಸಿಗಳೆಲ್ಲರೂ ಆತನ ಸಾನ್ನಿಧ್ಯದಿಂದ ಉಕ್ಕಿ ಹರಿಯುವಂತೆ ಮಾಡುತ್ತದೆ.

ಅದೇ ರೀತಿ, ಆಯಾ ಸನ್ನಿವೇಶಕ್ಕೆ ತಕ್ಕಂತೆ ಸೂಕ್ತವಾದ ಹಾಡುಗಳನ್ನು ಹಾಡಲು ಪವಿತ್ರಾತ್ಮನು ನಮ್ಮನ್ನು ಪ್ರೇರೇಪಿಸುತ್ತಾನೆ. ಆ ಹಾಡುಗಳು ನಮಗೆ ವೈಯಕ್ತಿಕವಾಗಿ ಮಾತ್ರವಲ್ಲದೆ, ಇಡೀ ಸಭೆಯ ಆತ್ಮಿಕ ಉಜ್ಜೀವನಕ್ಕೂ ಆಶೀರ್ವಾದವಾಗುತ್ತವೆ.

ಇದೇ ರೀತಿಯಲ್ಲಿ, ನಮ್ಮ ಪ್ರಾರ್ಥನೆಗಳು, ಹಾಡುಗಳು ಮತ್ತು ಸಂದೇಶಗಳು ಪವಿತ್ರಾತ್ಮನ ಪ್ರೇರೇಪಣೆಯಿಂದ ನಡೆಸಲ್ಪಟ್ಟರೆ, ಖಂಡಿತವಾಗಿಯೂ ಆತ್ಮಗಳ ದೊಡ್ಡ ಸುಗ್ಗಿ ಮತ್ತು ಹೇರಳವಾದ ಫಲ ಸಿಗುತ್ತದೆ.

ನಾವು ಆತ್ಮನ ಪ್ರೇರೇಪಣೆಯ ಪ್ರಕಾರ ನಡೆಯಬೇಕಾದರೆ ನಮ್ಮ ಕಡೆಯಿಂದಲೂ ಕೆಲವು ಜವಾಬ್ದಾರಿಗಳಿವೆ. ನಾವು ನಿರಂತರವಾಗಿ ನಮ್ಮ ಹೃದಯಗಳನ್ನು ಪವಿತ್ರಾತ್ಮನೊಂದಿಗೆ ಜೋಡಿಸಿಟ್ಟುಕೊಳ್ಳಬೇಕು ಮತ್ತು ಆತನ ಚಿತ್ತವೇನು ಹಾಗೂ ಆತನು ಏನು ಮಾತನಾಡುತ್ತಿದ್ದಾನೆ ಎಂಬುದನ್ನು ಎಚ್ಚರಿಕೆಯಿಂದ ಗ್ರಹಿಸಬೇಕು. ಇದಕ್ಕಾಗಿ, ಆತ್ಮಿಕ ಸೂಕ್ಷ್ಮತೆಯು ತುಂಬಾ ಅತ್ಯಗತ್ಯ. ಕೆಲವೊಮ್ಮೆ, ಹೊಸ ಆತ್ಮಗಳನ್ನು ಭೇಟಿಯಾಗಲು ಆತನು ನಮ್ಮನ್ನು ಪ್ರೇರೇಪಿಸಬಹುದು. ಇನ್ನು ಕೆಲವು ಬಾರಿ, ಆಸ್ಪತ್ರೆಗಳಿಗೆ ಭೇಟಿ ನೀಡಿ ಕಾಯಿಲೆಯಿಂದಿರುವವರೊಂದಿಗೆ ಮಾತನಾಡಲು ನಮ್ಮನ್ನು ಪ್ರಚೋದಿಸಬಹುದು.

ಪ್ರಿಯ ದೇವರ ಮಕ್ಕಳೇ, ಕರ್ತನು ನಿಮ್ಮೊಂದಿಗೆ ಮಾತನಾಡುವಾಗ ತಕ್ಷಣವೇ ವಿಧೇಯರಾಗಿರಿ. ನೀವು ವಿಧೇಯರಾದರೆ, ಆತನು ಇನ್ನು ಆಳವಾದ ದೈವೀಕ ರಹಸ್ಯಗಳನ್ನು ನಿಮಗೆ ಪ್ರಕಟಿಸುತ್ತಾ ನಿಮ್ಮನ್ನು ಮುಂದೆ ನಡೆಸುತ್ತಾನೆ. ಆದರೆ ನೀವು ವಿಧೇಯರಾಗಲು ತಪ್ಪಿದರೆ, ಆತನು ನಿಮಗೆ ಪ್ರೇರೇಪಿಸುವದನ್ನೇ ನಿಲ್ಲಿಸಿಬಿಡಬಹುದು.

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಹೇಗೆ ಮಾತನಾಡಬೇಕು, ಏನು ಹೇಳಬೇಕು ಎಂದು ಚಿಂತೆಮಾಡಬೇಡಿರಿ; ಆಡತಕ್ಕ ಮಾತು ಆ ಗಳಿಗೆಯಲ್ಲಿ ಸೂಚನೆಯಾಗುವದು. ಮಾತನಾಡುವವರು ನೀವಲ್ಲ, ನಿಮ್ಮ ತಂದೆಯ ಆತ್ಮನೇ ನಿಮ್ಮ ಮುಖಾಂತರವಾಗಿ ಮಾತನಾಡುವನು.” (ಮತ್ತಾ 10:19,20)

Leave A Comment

Your Comment
All comments are held for moderation.