Appam, Appam - Kannada

ಜುಲೈ 18 – ರಾಜಕಿರೀಟ!

“ವಷ್ಟಿರಾಣಿಯು ರಾಜ ಮುಕುಟವನ್ನು ಧರಿಸಿಕೊಂಡು ರಾಜಸನ್ನಿಧಿಗೆ ಬರಬೇಕೆಂಬದಾಗಿ ಅಜ್ಞಾಪಿಸಿದನು.” (ಎಸ್ತೇರ 1:11)

ಎಸ್ತೇರಳ ಪುಸ್ತಕದಲ್ಲಿ, ಅರಸನಾದ ಅಹಷ್ವೇರೋಷನು ದೊಡ್ಡ ಔತಣಕೂಟವನ್ನು ಏರ್ಪಡಿಸಿ, ರಾಣಿಯಾದ ವಷ್ಟಿಯನ್ನು ರಾಜಕಿರೀಟದೊಂದಿಗೆ ತನ್ನ ಮುಂದೆ ಕರೆತರಲು ಆಜ್ಞಾಪಿಸುವುದನ್ನು ನಾವು ಓದುತ್ತೇವೆ. ಆದರೆ ಅವಳು ರಾಜನ ಆಜ್ಞೆಯನ್ನು ನಿರಾಕರಿಸಿದಳು.

ಇಂದು, ರಾಜಾಧಿರಾಜನೂ ಕರ್ತನೂ ಆದ ಯೇಸು ಕ್ರಿಸ್ತನು ತನ್ನ ಜನರನ್ನು ಕುರಿಮರಿಯಾದಾತನ ವಿವಾಹದ ಔತಣಕ್ಕೆ ಕರೆಯುತ್ತಿದ್ದಾನೆ. ಆತನು ನಮ್ಮನ್ನು ಆತ್ಮೀಕ ಸೌಂದರ್ಯದಿಂದ ಮತ್ತು ಪರಲೋಕದ ಮಹಿಮೆಯಿಂದ ಅಲಂಕರಿಸಲು ಬಯಸುತ್ತಾನೆ. ಆದರೆ ಆತನು ಬಯಸುವ ಅಲಂಕಾರವು ಕೇವಲ ಬಾಹ್ಯವಾದುದಲ್ಲ—ಅದು ಪ್ರಮುಖವಾಗಿ ಆಂತರಿಕವಾದುದು.

ದೇವರು ಬಯಸುವ ಮೊದಲ ಅಲಂಕಾರವೆಂದರೆ ಪರಿಶುದ್ಧತೆ. ಆದ್ದರಿಂದ, ನಾವು ಆತನನ್ನು ಪರಿಶುದ್ಧತೆಯ ಸೌಂದರ್ಯದಲ್ಲಿ ಆರಾಧಿಸಬೇಕು. ನಾವು ಆತನ ಸನ್ನಿಧಿಗೆ ಬರುವಾಗ, ಆತನು ಒದಗಿಸಿದ ವಸ್ತ್ರಗಳನ್ನು ಧರಿಸಿರಬೇಕು—ಅವು ಯಾವವೆಂದರೆ ರಕ್ಷಣೆಯ ವಸ್ತ್ರ ಮತ್ತು ನೀತಿಯ ನಿಲುವಂಗಿ.

ಎರಡನೆಯದಾಗಿ, ದೇವರ ಮಕ್ಕಳ ಅಲಂಕಾರವು ಸಮರ್ಪಣೆ ಮತ್ತು ಶರಣಾಗತಿಯ ಜೀವಿತವಾಗಿದೆ. ಕೀರ್ತನೆಗಾರನು ಹೇಳುತ್ತಾನೆ: “ನಿನ್ನ ಸ್ವಜನರನ್ನೂ ತವರುಮನೆಯನ್ನೂ ಮರೆತುಬಿಡು. ಆಗ ರಾಜನು ನಿನ್ನ ಲಾವಣ್ಯವನ್ನು ನೋಡಲಪೇಕ್ಷಿಸುವನು.” (ಕೀರ್ತನೆ 45:10–11)

ಆತ್ಮಿಕ ಅರ್ಥದಲ್ಲಿ, “ನಿನ್ನ ತಂದೆಯ ಮನೆ” ಎಂಬುದು ಆದಾಮನಿಂದ ಬಂದ ಹಳೆಯ ಸ್ವಭಾವವನ್ನು—ಅವಿಧೇಯತೆ ಮತ್ತು ಸ್ವಯಂ-ಇಚ್ಛೆಯ ಸ್ವಭಾವವನ್ನು ಸೂಚಿಸುತ್ತದೆ. ಅದಕ್ಕಾಗಿಯೇ ದೇವರು ಅಬ್ರಹಾಮನನ್ನು ಕರೆದು, “ನೀನು ಸ್ವದೇಶವನ್ನೂ ಬಂಧು ಬಳಗವನ್ನು ಬಿಟ್ಟು ನಾನು ತೋರಿಸುವ ದೇಶಕ್ಕೆ ಹೊರಟುಹೋಗು” ಅಂದನು (ಆದಿ 12:1). ನಾವು ಹಳೆಯ ಜೀವನವನ್ನು ಹಿಂದೆ ಬಿಟ್ಟು ಆತನಿಗೆ ಸಂಪೂರ್ಣವಾಗಿ ನಮ್ಮನ್ನು ಅರ್ಪಿಸಿಕೊಳ್ಳಬೇಕೆಂದು ಕರ್ತನು ಬಯಸುತ್ತಾನೆ.

ಮೂರನೆಯದಾಗಿ, ದೇವರ ಜನರ ನಿಜವಾದ ಅಲಂಕಾರವು ಬಾಹ್ಯ ಸೌಂದರ್ಯವಲ್ಲ, ಬದಲಾಗಿ ಆಂತರಿಕ ಗುಣಸ್ವಭಾವವಾಗಿದೆ. ಅಪೊಸ್ತಲನಾದ ಪೇತ್ರನು ಬರೆಯುತ್ತಾನೆ: “ಹೊರಗಣ ಶೃಂಗಾರವೇ ನಿಮ್ಮ ಅಲಂಕಾರವಾಗಿರಬಾರದು. ಸಾತ್ವಿಕವಾದ ಶಾಂತಮನಸ್ಸು ಎಂಬ ಒಳಗಿನ ಭೂಷಣವೇ ನಿಮ್ಮ ಅಲಂಕಾರವಾಗಿರಲಿ. ಇದು ಶಾಶ್ವತವಾದದ್ದೂ ದೇವರ ದೃಷ್ಟಿಗೆ ಬಹು ಬೆಲೆಯುಳ್ಳದ್ದೂ ಆಗಿದೆ.” (1 ಪೇತ್ರ 3:3–4). ಶಾಂತ ಹಾಗೂ ಸೌಮ್ಯವಾದ ಆತ್ಮವು ದೇವರ ಮುಂದೆ ಮಹತ್ತರವಾದ ಮೌಲ್ಯವನ್ನು ಹೊಂದಿದೆ.

ಕರ್ತನು ತನ್ನ ಮಕ್ಕಳನ್ನು ಅಲಂಕರಿಸುವುದು ಮಾತ್ರವಲ್ಲದೆ, ಅವರಿಗೆ ಕಿರೀಟಗಳನ್ನೂ ವಾಗ್ದಾನ ಮಾಡಿದ್ದಾನೆ. ಈ ಕಿರೀಟಗಳು ಆತನು ತನ್ನ ನಂಬಿಗಸ್ತ ಸೇವಕರಿಗೆ ನೀಡುವ ಅಭಿಷೇಕ, ಅಧಿಕಾರ, ಜವಾಬ್ದಾರಿ ಮತ್ತು ಆತ್ಮಿಕ ಸೌಭಾಗ್ಯಗಳನ್ನು ಸಂಕೇತಿಸುತ್ತವೆ.

ನಂಬಿಕೆಯಲ್ಲಿ ಸ್ಥಿರವಾಗಿ ನಿಂತು, ತಮ್ಮ ಓಟವನ್ನು ಮುಗಿಸಿ, ಕ್ರಿಸ್ತನಿಗೆ ನಂಬಿಗಸ್ತರಾಗಿ ಉಳಿಯುವವರು ಒಂದು ದಿನ ನೀತಿಯ ಕಿರೀಟವನ್ನು ಪಡೆದುಕೊಳ್ಳುವರು. ಪೌಲನು ಸಾಕ್ಷಿ ನೀಡಿದಂತೆ: “ನಾನು ಶ್ರೇಷ್ಠವಾದ ಹೋರಾಟವನ್ನು ಮಾಡಿದ್ದೇನೆ. ನನ್ನ ಓಟವನ್ನು ಕಡೆಗಾಣಿಸಿದ್ದೇನೆ, ಕ್ರಿಸ್ತ ನಂಬಿಕೆಯನ್ನು ಕಾಪಾಡಿಕೊಂಡಿದ್ದೇನೆ.” (2 ತಿಮೊಥೆ 4:7)

ಪ್ರೀತಿಯ ದೇವರ ಮಕ್ಕಳೇ, ನಾವು ಪರಿಶುದ್ಧತೆ, ಸಮರ್ಪಣೆ, ದೀನತೆ ಮತ್ತು ಕ್ರಿಸ್ತನಂತಹ ಚೇತನದಿಂದ ಅಲಂಕೃತರಾಗೋಣ; ಆಗ ನಾವು ರಾಜನ ಮುಂದೆ ನಿಲ್ಲಲು ಮತ್ತು ಆತನನ್ನು ಪ್ರೀತಿಸುವವರಿಗಾಗಿ ಆತನು ಸಿದ್ಧಪಡಿಸಿರುವ ಕಿರೀಟಗಳನ್ನು ಸ್ವೀಕರಿಸಲು ಯೋಗ್ಯರಾಗಿ ಕಂಡುಬರುತ್ತೇವೆ.

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಕಷ್ಟವನ್ನು ಸಹಿಸಿಕೊಳ್ಳುವವನು ಧನ್ಯನು; ಅವನು ಪರಿಶೋಧಿತನಾದ ಮೇಲೆ ಜೀವವೆಂಬ ಜಯಮಾಲೆಯನ್ನು ಹೊಂದುವನು; ಸ್ವಾಮಿಯು ತಾನು ಪ್ರೀತಿಸುವವರಿಗೆ ಇದನ್ನು ವಾಗ್ದಾನ ಮಾಡಿದ್ದಾನೆ.” (ಯಾಕೋ 1:12)

Leave A Comment

Your Comment
All comments are held for moderation.