ಜುಲೈ 06 – ಗುಡುಗಿನಂತಹ ಧ್ವನಿ!
“‘ತಂದೆಯೇ, ನಿನ್ನ ಹೆಸರನ್ನು ಮಹಿಮೆಪಡಿಸಿಕೋ’ ಅಂದನು. ಅದಕ್ಕೆ ಮಹಿಮೆಪಡಿಸಿದ್ದೇನೆ, ತಿರುಗಿ ಮಹಿಮೆಪಡಿಸುವೆನ ಎಂದು ಆಕಾಶವಾಣಿಯಾಯಿತು” (ಯೋಹಾ 12:28).
ತನ್ನ ಮರಣದ ಸಮಯವು ಹತ್ತಿರವಾಗುತ್ತಿರುವುದನ್ನು ಯೇಸು ಕ್ರಿಸ್ತನ ಅರಿತುಕೊಂಡಾಗ, ಆತನು—”ತಂದೆಯೇ, ನಿನ್ನ ಹೆಸರನ್ನು ಮಹಿಮೆಪಡಿಸಿಕೋ” ಎಂದು ಪ್ರಾರ್ಥಿಸಿದನು. ಪ್ರತಿಯೊಬ್ಬ ಕ್ರೈಸ್ತನ ಮರಣವೂ ಸಹ ಇದೇ ರೀತಿ ದೇವರ ಹೆಸರಿಗೆ ಮಹಿಮೆಯನ್ನು ತರುವಂತದ್ದಾಗಿರಬೇಕು.
ಪರಿಶುದ್ಧ ಗ್ರಂಥವು ಹೀಗೆ ಹೇಳುತ್ತದೆ: “ಸುಗಂಧತೈಲಕ್ಕಿಂತ ಒಳ್ಳೆಯ ಹೆಸರು ಉತ್ತಮ; ಜನನ ದಿನಕ್ಕಿಂತ ಮರಣದಿನ ಮೇಲು.” (ಪ್ರಸಂಗಿ 7:1).
ಜೀವನದ ಆರಂಭಕ್ಕಿಂತ ಅದರ ಅಂತ್ಯವು ಹೆಚ್ಚು ಮಹಿಮೆಯುಳ್ಳದ್ದಾಗಿರಬೇಕು. ಒಬ್ಬನ ಆರಂಭವು ಎಷ್ಟೇ ಅಲ್ಪವಾಗಿದ್ದರೂ, ಅದರ ಮುಕ್ತಾಯವು ಆತ್ಮಿಕ ವಿಜಯ ಮತ್ತು ಗೌರವದಿಂದ ಕೂಡಿರಬೇಕು.
ನಾವು ಶಾಪಗಳು, ಕತ್ತಲೆ, ಕಾಯಿಲೆಗಳು, ದ್ರೋಹಗಳು ಮತ್ತು ತೊಂದರೆಗಳಿಂದ ತುಂಬಿದ ಜಗತ್ತಿನಲ್ಲಿ ಬದುಕುತ್ತಿದ್ದೇವೆ. ದೊಬ್ಬಲ್ಪಟ್ಟ ದೂತರು ಕೆಳಗೆ ತಳ್ಳಲ್ಪಟ್ಟಾಗ, ಭೂಮಿಯು ಅಸ್ತವ್ಯಸ್ತ ಹಾಗೂ ಕ್ರಮವಿಲ್ಲದ ಪಾಳುಭೂಮಿಯಾಯಿತು. ಮಾನವಕುಲವು ಪಾಪದಲ್ಲಿ ಬಿದ್ದಾಗ, ಭೂಮಿಯೇ ಶಾಪಕ್ಕೊಳಗಾಗಿ ಮುಳ್ಳುಗಳನ್ನೂ ಬೆಳೆಯಲು ಆರಂಭಿಸಿತು.
ತಾನು ಅನುಭವಿಸಲಿರುವ ಮರಣವು ಊಹಿಸಲೂ ಸಾಧ್ಯವಿಲ್ಲದ ವೇದನೆಯಿಂದ ಕೂಡಿರುತ್ತದೆ ಎಂಬುದನ್ನು ಯೇಸು ಕ್ರಿಸ್ತನು ಅರಿತಿದ್ದನು. ತಾನು ಮುಳ್ಳಿನ ಕಿರೀಟವನ್ನು ಧರಿಸಬೇಕಾಗುತ್ತದೆ, ಬಹಿರಂಗವಾಗಿ ಅವಮಾನಕ್ಕೊಳಗಾಗಬೇಕು ಮತ್ತು ಮನುಷ್ಯರ ಕಣ್ಣುಗಳೆದುರಿಗೆ ಶಿಲುಬೆಯ ಮೇಲೆ ತೂಗಾಡಬೇಕು ಎಂಬುದನ್ನು ಆತನು ತಿಳಿದಿದ್ದನು. ತಾನು ಅಪಹಾಸ್ಯ, ತಿರಸ್ಕಾರ ಮತ್ತು ಅಪಮಾನಗಳಿಗೆ ಗುರಿಯಾಗಬೇಕಾಗುತ್ತದೆ ಎಂಬುದನ್ನೂ ಆತನು ಬಲ್ಲವನಾಗಿದ್ದನು.
ಶಿಲುಬೆಗೆ ಹಾಕಲ್ಪಡುತ್ತಿದ್ದವರು ಹೆಚ್ಚಾಗಿ ಜನಸಮೂಹವನ್ನು ಶಪಿಸುತ್ತಿದ್ದರು, ದೇವರನ್ನು ದೂಷಿಸುತ್ತಿದ್ದರು ಮತ್ತು ತಡೆಯಲಾಗದ ಯಾತನೆಯಿಂದ ಕೂಗಾಡುತ್ತಿದ್ದರು. ಆದರೆ ಯೇಸು ತನ್ನ ಸಂಕಟದ ಸಮಯವನ್ನು ಪ್ರಾರ್ಥನೆಯ ಸಮಯವನ್ನಾಗಿ ಮಾರ್ಪಡಿಸಿದನು. ಮರಣದಲ್ಲಿಯೂ ತಂದೆಯನ್ನು ಮಹಿಮೆಪಡಿಸುವುದೇ ಆತನ ಹಂಬಲವಾಗಿತ್ತು.
ಗೆತ್ಸೇಮನೆಯಲ್ಲಿ ಆತನು ಮಾಡಿದ ಪ್ರಾರ್ಥನೆಯು ಈ ಹಂಬಲವನ್ನು ಪ್ರತಿಫಲಿಸುತ್ತದೆ: “ಮಾಡಬೇಕೆಂದು ನೀನು ನನಗೆ ಕೊಟ್ಟ ಕೆಲಸವನ್ನು ನಾನು ನೆರವೇರಿಸಿ ನಿನ್ನನ್ನು ಭೂಲೋಕದಲ್ಲಿ ಮಹಿಮೆಪಡಿಸಿದೆನು. ಈಗ ತಂದೆಯೇ, ನೀನು ನಿನ್ನ ಬಳಿಯಲ್ಲಿ ನನ್ನನ್ನು ಮಹಿಮೆ ಪಡಿಸು; ಲೋಕ ಉಂಟಾಗುವದಕ್ಕಿಂತ ಮುಂಚೆ ನಿನ್ನ ಬಳಿಯಲ್ಲಿ ನನಗಿದ್ದ ಮಹಿಮೆಯಿಂದಲೇ ನನ್ನನ್ನು ಮಹಿಮೆಪಡಿಸು” (ಯೋಹಾ 17:4–5).
ಪ್ರವಾದಿಯಾದ ಯೆಶಾಯನು ಈ ದೃಶ್ಯವನ್ನು ಮೊದಲೇ ಕಂಡು ಹೀಗೆ ಪ್ರವಾದಿಸಿದನು: “ತನ್ನ ಪ್ರಾಣವನ್ನು ಧಾರೆಯೆರೆದು ಮರಣಹೊಂದಿ ದ್ರೋಹಿಗಳೊಂದಿಗೆ ತನ್ನನ್ನೂ ಎಣಿಸಿಕೊಂಡು ಬಹುಜನ ದ್ರೋಹಿಗಳ ಪಾಪವನ್ನು ಹೊರುತ್ತಾ ಅವರಿಗಾಗಿ ವಿಜ್ಞಾಪನೆಮಾಡಿದನಲ್ಲಾ.” (ಯೆಶಾ 53:12).
ಯೇಸು ತನ್ನ ಮರಣದಲ್ಲಿಯೂ ತಂದೆಯನ್ನು ಮಹಿಮೆಪಡಿಸಿದ್ದರಿಂದಲೇ, ಆ ಕ್ಷಣದಲ್ಲಿಯೂ ಆತನಿಗೆ ಆತ್ಮಗಳನ್ನು ಗೆಲ್ಲಲು ಸಾಧ್ಯವಾಯಿತು. ಶಿಲುಬೆಯ ಮೇಲೆ ಆತನ ಪಕ್ಕದ ಕ್ರೂಜೆಯಲ್ಲಿ ತೂಗಾಡುತ್ತಿದ್ದ ಕಳ್ಳನು, ಕ್ರಿಸ್ತನ ಮರಣದಿಂದ ಹರಿದುಬಂದ ಕೃಪೆಯ ಮೂಲಕ ರಕ್ಷಣೆಯನ್ನು ಕಂಡುಕೊಂಡನು.
ಇಂದು ಅನೇಕ ಜನರು ಮರಣಕ್ಕೆ ಹೆದರುತ್ತಾರೆ. ಕೆಲವರು ಸ್ಮಶಾನದ ಪಕ್ಕದಲ್ಲಿ ಹಾದುಹೋಗಲು ಸಹ ಹಿಂಜರಿಯುತ್ತಾರೆ. ಇನ್ನು ಕೆಲವರು ಶವಯಾತ್ರೆಯನ್ನು ಕಂಡಾಗಲೆಲ್ಲಾ ಭಯದಿಂದ ಹಿಂದೆ ಸರಿಯುತ್ತಾರೆ. ಆದಾಗ್ಯೂ ದೇವರ ವಾಕ್ಯವು ನಮಗೆ ನೆನಪಿಸುತ್ತದೆ: “ಒಂದೇ ಸಾರಿ ಸಾಯುವದೂ ಆಮೇಲೆ ನ್ಯಾಯತೀರ್ಪೂ ಮನುಷ್ಯರಿಗೆ ಹೇಗೆ ನೇಮಕವಾಗಿದೆಯೋ ಹಾಗೆಯೇ ಕ್ರಿಸ್ತನು ಸಹ ಬಹುಜನರ ಪಾಪಗಳನ್ನು ಹೊತ್ತುಕೊಳ್ಳುವದಕ್ಕೋಸ್ಕರ ಒಂದೇ ಸಾರಿ ಸಮರ್ಪಿತನಾದನು .” (ಇಬ್ರಿ 9:27).
ಪ್ರಿಯ ದೇವರ ಮಕ್ಕಳೇ, ನಿಮ್ಮ ಜೀವನದ ಮುಕ್ತಾಯವು ಪರಿಪೂರ್ಣವೂ, ಜಯಶಾಲಿಯೂ ಮತ್ತು ಮಹಿಮೆಯಿಂದ ತುಂಬಿರಲಿ. ನಿಮ್ಮ ಕೊನೆಯ ಸಾಕ್ಷ್ಯವು ನೀವು ಸೇವೆ ಮಾಡಿದ ಕರ್ತನಿಗೆ ಗೌರವವನ್ನು ತರಲಿ.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಕರ್ತನ ಭಕ್ತರ ಮರಣವು ಆತನ ದೃಷ್ಟಿಯಲ್ಲಿ ಅಮೂಲ್ಯವಾದದ್ದಾಗಿದೆ.” (ಕೀರ್ತನೆ 116:15).