ಜುಲೈ 03 –ಆಕಾಶದಿಂದ ಬಂದ ಧ್ವನಿ!
“ಅರಸನಾದ ನೆಬೂಕದ್ನೆಚ್ಚರನೇ, ನಿನಗಾದ ದೈವೋಕ್ತಿಯನ್ನು ಕೇಳು: ರಾಜ್ಯವು ನಿನ್ನಿಂದ ತೊಲಗಿದೆ ಎಂದು ಆಕಾಶವಾಣಿಯಾಯಿತು!’” (ದಾನಿ 4:31).
ನೆಬೂಕದ್ನೆಚ್ಚರನು ತನ್ನ ರಾಜ್ಯ ಮತ್ತು ತನ್ನ ಆಳ್ವಿಕೆಯ ಬಗ್ಗೆ ಅಪಾರವಾದ ಹೆಮ್ಮೆಯನ್ನು ಹೊಂದಿದ್ದನು. ಭೂಮ್ಯಾಕಾಶಗಳು ಕರ್ತನಿಗೆ ಸೇರಿವೆ ಎಂಬುದನ್ನು ಅವನು ಮರೆತುಬಿಟ್ಟನು. ತಾನು ಬದುಕಲು ಮತ್ತು ಈ ಭೂಮಿಯ ಮೇಲೆ ಆಳ್ವಿಕೆ ನಡೆಸಲು ದೇವರು ತನಗೆ ಕೃಪೆಯಿಂದ ಅವಕಾಶ ನೀಡಿದ್ದಾನೆ ಎಂಬುದನ್ನೂ ಅವನು ಮರೆತನು.
ಒಂದು ದಿನ, ಅರಸನು ಬಾಬೆಲಿನ ರಾಜಮಂದಿರದ ಮೇಲ್ಛಾವಣಿಯ ಮೇಲೆ ತಿರುಗಾಡುತ್ತಿದ್ದಾಗ: “ನನ್ನ ಮಹಿಮೆಯು ಪ್ರಸಿದ್ಧಿಗೆ ಬರುವಂತೆ ನನ್ನ ಸಾಮರ್ಥ್ಯಬಲದಿಂದ ರಾಜನಿವಾಸಕ್ಕಾಗಿ ನಾನು ಕಟ್ಟಿಸಿಕೊಂಡಿರುವದು ಇಗೋ, ಮಹಾ ಪಟ್ಟಣವಾದ ಈ ಬಾಬೆಲ್ಎಂದು ಕೊಚ್ಚಿಕೊಂಡನು (ದಾನಿ 4:30).
ಅನೇಕ ಜನರು ಪರಲೋಕದಿಂದ ಪ್ರೀತಿಯ ಮತ್ತು ಮೃದುವಾದ ಧ್ವನಿಗಳನ್ನು ಕೇಳಿದ್ದಾರೆ. ಇನ್ನು ಕೆಲವರು ಎಚ್ಚರಿಕೆಯ ಧ್ವನಿಗಳನ್ನು ಕೇಳಿದ್ದಾರೆ. ಆದರೆ ಈ ಸಂದರ್ಭದಲ್ಲಿ ಆಕಾಶದಿಂದ ಬಂದ ಧ್ವನಿಯು ದೈವಿಕ ನ್ಯಾಯತೀರ್ಪಿನ ಧ್ವನಿಯಾಗಿತ್ತು.
“ಅರಸನಾದ ನೆಬೂಕದ್ನೆಚ್ಚರನೇ, ನಿನಗಾದ ದೈವೋಕ್ತಿಯನ್ನು ಕೇಳು: ರಾಜ್ಯವು ನಿನ್ನಿಂದ ತೊಲಗಿದೆ! ನೀನು ಮನುಷ್ಯರೊಳಗಿಂದ ತಳ್ಳಲ್ಪಟ್ಟು ಕಾಡು ಮೃಗಗಳೊಂದಿಗೆ ವಾಸಿಸುವಿ, ದನಗಳಂತೆ ಹುಲ್ಲುಮೇಯುವದೇ ನಿನಗೆ ಗತಿಯಾಗುವದು; ಪರಾತ್ಮರನು ಮನುಷ್ಯರ ರಾಜ್ಯದಲ್ಲಿ ಅದನ್ನು ತನಗೆ ಬೇಕಾದವರಿಗೆ ಒಪ್ಪಿಸುತ್ತಾನೆ ಎಂಬದು ನಿನ್ನ ತಿಳುವಳಿಕೆಗೆ ಬರುವದರೊಳಗೆ ಏಳು ವರುಷ ನಿನಗೆ ಹೀಗೆ ಕಳೆಯುವದು ಎಂದು ಆಕಾಶವಾಣಿಯಾಯಿತು.” (ದಾನಿ 4:31–32). ವಿವೇಚನಾ ಶಕ್ತಿಯನ್ನು ಹೊಂದಿದ್ದ ಒಬ್ಬ ಮನುಷ್ಯನು ಅಹಂಕಾರದ ಕಾರಣದಿಂದಾಗಿ ಮೃಗದಂತಾದನು.
ಪ್ರಿಯ ದೇವರ ಮಕ್ಕಳೇ, ಅಹಂಕಾರಕ್ಕೆ ಎಂದಿಗೂ ಅವಕಾಶ ಕೊಡಬೇಡಿ. ಹೆಮ್ಮೆಯು ಸೈತಾನನಿಂದ ಹುಟ್ಟುವ ಒಂದು ಕೆಟ್ಟ ಗುಣವಾಗಿದ್ದು, ಅದನ್ನು ವಿರೋಧಿಸಲೇಬೇಕು. ಇಲ್ಲದಿದ್ದರೆ, ಕರ್ತನೇ ನಿಮ್ಮನ್ನು ಎದುರಿಸಬಹುದು ಮತ್ತು ನೀವೂ ಸಹ ತಗ್ಗಿಸಲ್ಪಡಬಹುದು.
ಲೂಸಿಫರನ ಉದಾಹರಣೆಯನ್ನು ನೋಡಿರಿ. ಅವನು ಪರಲೋಕದಲ್ಲಿ ಅಭಿಷಿಕ್ತ ಕೆರೂಬಿನೂ, ಸೌಂದರ್ಯದಲ್ಲಿ ಪರಿಪೂರ್ಣನೂ, ಜ್ಞಾನಭರಿತನೂ ಆದ ಒಬ್ಬ ಪರಾಕ್ರಮವುಳ್ಳ ದೂತನಾಗಿದ್ದು, ಉರಿಯುವ ರತ್ನಗಳ ಮಧ್ಯದಲ್ಲಿ ಓಡಾಡುತ್ತಿದ್ದನು. ಆದರೂ ಅವನ ಹೃದಯದಲ್ಲಿ ಅಹಂಕಾರವು ಪ್ರವೇಶಿಸಿದಾಗ, ಅವನು ಪರಲೋಕದಿಂದ ಕೆಳಗೆ ತಳ್ಳಲ್ಪಟ್ಟನು. ಅವನು ವಿನಾಶಕ್ಕೆ ಬಿದ್ದು ಸೈತಾನನಾದನು. ಹೆಮ್ಮೆಯು ಮಹಾ ನಾಶನವನ್ನು ತರುತ್ತದೆ. ಅವನು ಮಹಿಮೆಯುಳ್ಳ ದೂತನಾಗಿದ್ದರೂ, ಅಹಂಕಾರವು ಅವನನ್ನು ಪಿಶಾಚಿನನ್ನಾಗಿ ಮಾಡಿತು.
ಅದೇ ಅಹಂಕಾರವು ನೆಬೂಕದ್ನೆಚ್ಚರನನ್ನು ಮೃಗದ ಸ್ಥಿತಿಗೆ ಇಳಿಸಿ, ಅವನನ್ನು ಹುಚ್ಚುತನಕ್ಕೆ ತಳ್ಳಿತು. ಏಳು ವರ್ಷಗಳ ನಂತರವೇ ನೆಬೂಕದ್ನೆಚ್ಚರನು ತನ್ನ ಕಣ್ಣುಗಳನ್ನು ಆಕಾಶದ ಕಡೆಗೆ ಎತ್ತಿದನು. ಅವನು ಭೂಮ್ಯಾಕಾಶಗಳನ್ನು ಸೃಷ್ಟಿಸಿದ ಕರ್ತನ ಕಡೆಗೆ ತನ್ನ ಹೃದಯವನ್ನು ತಿರುಗಿಸಿದನು. ಆಮೇಲೆ ಅವನು ಬಾಬೆಲಿನ ವೈಭವ ಮತ್ತು ಪ್ರಭಾವದ ಬಗ್ಗೆ ಯೋಚಿಸುವುದನ್ನು ನಿಲ್ಲಿಸಿದನು. ಅವನು ಮಹೋನ್ನತನ ಕಡೆಗೆ ನೋಡಿದಾಗ, ಅವನ ಬುದ್ಧಿಯು ಅವನಿಗೆ ಮರಳಿ ಬಂತು.
ಪ್ರೀತಿಯ ದೇವರ ಮಕ್ಕಳೇ, ನಿಮ್ಮ ಕಣ್ಣುಗಳು ಯಾವಾಗಲೂ ಪರಲೋಕದ ಮೇಲೆಯೇ ಇರಲಿ. ಪರಲೋಕದ ದೇವರನ್ನು ಸ್ತುತಿಸಲು, ಆರಾಧಿಸಲು ಮತ್ತು ಮಹಿಮೆಪಡಿಸಲು ಇಂದು ಸಮಯವನ್ನು ಮೀಸಲಿಡಿರಿ.
ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ:
“ಈಗ ನೆಬೂಕದ್ನೆಚ್ಚರನಾದ ನಾನು ಪರಲೋಕ ರಾಜನನ್ನು ಹೊಗಳಿ ಕೊಂಡಾಡಿ ಕೀರ್ತಿಸುತ್ತೇನೆ; ಆತನ ಕಾರ್ಯಗಳೆಲ್ಲಾ ಸತ್ಯ, ಆತನ ಮಾರ್ಗಗಳೆಲ್ಲಾ ನ್ಯಾಯ.” (ದಾನಿ 4:37).