Appam, Appam - Kannada

ಆಗಸ್ಟ್ 26 – ಐದು ಮಂಟಪಗಳು

“ಯೆರೂಸಲೇಮಿನಲ್ಲಿ ಕುರಿ ಅಗಸೇಬಾಗಲಿನ ಹತ್ತಿರದಲ್ಲಿ ಒಂದು ಕೊಳವಿದೆ; ಇದಕ್ಕೆ ಇಬ್ರಿಯ ಮಾತಿನಲ್ಲಿ ಬೇತ್ಸಥಾ ಎಂದು ಹೆಸರು. ಅಲ್ಲಿ ಐದು ಮಂಟಪಗಳಿವೆ.” (ಯೋಹಾ 5:2)

ಇಂದು, ನಾನು ನಿಮ್ಮನ್ನು ಇಸ್ರಾಯೇಲ್ ದೇಶದಲ್ಲಿರುವ ಬೇತ್ಸಥಾ ಕೊಳದ ಬಳಿಗೆ ಕರೆದೊಯ್ಯಲು ಬಯಸುತ್ತೇನೆ. ಆ ದೃಶ್ಯವನ್ನು ಕಲ್ಪಿಸಿಕೊಳ್ಳಿರಿ: ಸಾವಿರಾರು ರೋಗಿಗಳು ಕೊಳದ ಸುತ್ತಲೂ ನೆರೆದು, ಅದರ ನೀರು ಕಲುಕುವುದಕ್ಕಾಗಿ ಕಾಯುತ್ತಿದ್ದಾರೆ.

ಬೇತ್ಸಥಾ ಎಂದರೆ “ಕರುಣೆಯ ಮನೆ” ಎಂದರ್ಥ. ಈ ಕೊಳದ ವಿಶಿಷ್ಟತೆಯೇನೆಂದರೆ, ದೇವದೂತನು ಬಂದು ನೀರನ್ನು ಕಲುಕಿದಾಗ, ರೋಗದ ಸ್ವರೂಪ ಅಥವಾ ತೀವ್ರತೆಯನ್ನು ಲೆಕ್ಕಿಸದೆ, ಯಾರು ಮೊದಲು ಆ ನೀರಿಗೆ ಇಳಿಯುತ್ತಾರೋ ಅವರು ಸಂಪೂರ್ಣವಾಗಿ ಸ್ವಸ್ಥರಾಗುತ್ತಿದ್ದರು.

ಬೇತ್ಸಥಾದಲ್ಲಿ ವಯಸ್ಸಿನ ವ್ಯತ್ಯಾಸವಿರಲಿಲ್ಲ. ಒಬ್ಬ ವ್ಯಕ್ತಿಯು ಉಬ್ಬಸ, ಕ್ಯಾನ್ಸರ್ ಅಥವಾ ಯಾವುದೇ ಜೀವಕ್ಕೆ ಅಪಾಯಕಾರಿಯಾದ ಕಾಯಿಲೆಯಿಂದ ಬಳಲುತ್ತಿದ್ದರೂ ಅದಕ್ಕೆ ಪ್ರಾಮುಖ್ಯತೆ ಇರಲಿಲ್ಲ. ನೀರು ಕಲುಕಿದಾಗ ಮೊದಲು ಇಳಿಯುವುದೊಂದೇ ಅಗತ್ಯವಾಗಿತ್ತು. ಆ ಕ್ಷಣ ಯಾವಾಗ ಬರುತ್ತದೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಆ ಕೊಳವು ನಿಜವಾಗಿಯೂ ಕರುಣೆಯನ್ನು ನೀಡುತ್ತಿತ್ತು.

ಆದರೂ ಅದು ಪರಿಪೂರ್ಣವಾದ ಕರುಣೆಯಾಗಿರಲಿಲ್ಲ, ಅಥವಾ ಎಲ್ಲರಿಗೂ ಲಭ್ಯವಾಗುವ ಕರುಣೆಯಾಗಿರಲಿಲ್ಲ. ಕಾಯುತ್ತಿದ್ದವರಲ್ಲಿ ಮೂವತ್ತೆಂಟು ವರ್ಷಗಳಿಂದ ಕಾಯಿಲೆಯಿಂದ ಬಳಲುತ್ತಿದ್ದ ಒಬ್ಬ ಮನುಷ್ಯನಿದ್ದನು, ಅವನು ಸ್ವಸ್ಥತೆಗಾಗಿ ವ್ಯರ್ಥವಾಗಿ ಹಂಬಲಿಸುತ್ತಿದ್ದನು.

ಬೇತ್ಸಥಾದ ಐದು ಮಂಟಪಗಳು ಮತ್ತು ಮೂವತ್ತೆಂಟು ವರ್ಷಗಳ ರೋಗಿಯು ಏನನ್ನು ಸಂಕೇತಿಸುತ್ತಾರೆ ಎಂಬುದು ನಿಮಗೆ ಗೊತ್ತೇ?

ಧರ್ಮಶಾಸ್ತ್ರವು ಮೋಶೆಯ ಐದು ಪುಸ್ತಕಗಳನ್ನು (ಆದಿಕಾಂಡ, ವಿಮೋಚನಕಾಂಡ, ಯಾಜಕಕಾಂಡ, ಅರಣ್ಯಕಾಂಡ,

ಧರ್ಮೋಪದೇಶಕಾಂಡ) ಒಳಗೊಂಡಿರುವಂತೆಯೇ, ಬೇತ್ಸಥಾ ಕೊಳಕ್ಕೆ ಐದು ಮಂಟಪಗಳಿದ್ದವು. ಮೂವತ್ತೆಂಟು ವರ್ಷಗಳಿಂದ ರೋಗಿಯಾಗಿದ್ದ ಆ ಮನುಷ್ಯನು ಇಸ್ರಾಯೇಲನ್ನು ಪ್ರತಿನಿಧಿಸುತ್ತಾನೆ. ಐಗುಪ್ತದಿಂದ ಹೊರಟು ಅರಣ್ಯ ಸಂಚಾರವನ್ನು ಪೂರ್ಣಗೊಳಿಸುವವರೆಗೆ ಇಸ್ರಾಯೇಲ್ಯರು ಅರಣ್ಯದಲ್ಲಿ ಮೂವತ್ತೆಂಟು ವರ್ಷಗಳನ್ನು ಕಳೆದರು. ಧರ್ಮಶಾಸ್ತ್ರವು ದೇವರ ಕರುಣೆಯನ್ನು ಒಳಗೊಂಡಿದ್ದರೂ, ಅದು ಪರಿಪೂರ್ಣ ಸ್ವಸ್ಥತೆಯನ್ನಾಗಲಿ ಅಥವಾ ಪರಿಪೂರ್ಣ ವಿಮೋಚನೆಯನ್ನಾಗಲಿ ತರಲು ಸಾಧ್ಯವಾಗಲಿಲ್ಲ.

ನಂತರ ಯೇಸು ಕ್ರಿಸ್ತನು ಬಂದು ಕೃಪೆಯ ಒಡಂಬಡಿಕೆಯನ್ನು ಪರಿಚಯಿಸಿದನು. ಆತನು ಕರುಣಾಸಂಪನ್ನನಾಗಿದ್ದಾನೆ ಮತ್ತು ತನ್ನ ಬಳಿಗೆ ಬರುವ ಯಾರನ್ನೂ ಎಂದಿಗೂ ತಳ್ಳಿಬಿಡುವದಿಲ್ಲ. ಕ್ರಿಸ್ತನ ಬಳಿಗೆ ಬರುವ ಪ್ರತಿಯೊಬ್ಬ ವ್ಯಕ್ತಿಯೂ ಕರುಣೆಯನ್ನು ಕಂಡುಕೊಳ್ಳುತ್ತಾನೆ. ಆತನಲ್ಲಿ ದೈವಿಕ ಸ್ವಸ್ಥತೆ ಮತ್ತು ಪರಿಪೂರ್ಣ ಪುನರುಜ್ಜೀವನವಿದೆ. ಬೇತ್ಸಥಾಕ್ಕೆ ಐದು ಮಂಟಪಗಳಿದ್ದಂತೆಯೇ, ಕ್ರಿಸ್ತನು ತನ್ನ ಐದು ಗಾಯಗಳ ಗುರುತುಗಳನ್ನು ಹೊತ್ತಿದ್ದಾನೆ. ಮತ್ತು ಸ್ವಸ್ಥತೆಯ ನೀರು ಕೊಳವನ್ನು ತುಂಬಿದಂತೆಯೇ, ಆತನ ಅಮೂಲ್ಯವಾದ ರಕ್ತವು ರಕ್ಷಣೆ ಮತ್ತು ಸ್ವಸ್ಥತೆಯನ್ನು ನೀಡಲು ಆ ಗಾಯಗಳಿಂದ ಹರಿಯಿತು.

ಒಬ್ಬ ಕ್ರೈಸ್ತೀಯ ಬರಹಗಾರನು ಈ ಬೇತ್ಸಥಾಕ್ಕೆ ಹೋಗುವ ಮಾರ್ಗವನ್ನು ಈ ಮಾತುಗಳಲ್ಲಿ ವರ್ಣಿಸಿದ್ದಾನೆ: “ಬೇತ್ಸಥಾಕ್ಕೆ ಹೋಗುವ ಹಾದಿಯು ನಂಬಿಕೆಯ ಹಾದಿಯಾಗಿದೆ ಕ್ರೈಸ್ತೀಯ ಧರ್ಮವೆಂಬ ನಗರವನ್ನು ತಲುಪುವವರೆಗೆ ಆ ಹಾದಿಯಲ್ಲಿ ನಡೆಯಿರಿ. ಅಲ್ಲಿ ನೀವು ಕ್ರಿಸ್ತನೆಂಬ ಕೊಳದ ಬಳಿಗೆ ಬರುವಿರಿ. ಆತನ ಐದು ಗಾಯಗಳ ಮರೆಗೆ ಬನ್ನಿರಿ, ಮತ್ತು ಆತನ ಅಮೂಲ್ಯವಾದ ರಕ್ತದಲ್ಲಿ ನಿಮ್ಮನ್ನು ಮುಳುಗಿಸಿಕೊಳ್ಳಿರಿ. ನೀವು ಹಾಗೆ ಮಾಡುವ ಕ್ಷಣದಲ್ಲೇ, ನಿಮ್ಮ ಆತ್ಮದ ರೋಗಗಳು ನೀಗಿಸಲ್ಪಡುವವು.”

ಪ್ರಿಯ ದೇವರ ಮಗುವೇ, ಇಂದಿಗೂ ಯೇಸುಕ್ರಿಸ್ತನು ಕರುಣಾಮಯನಾಗಿದ್ದಾನೆ. ಆತನು ನಿನ್ನ ರೋಗಗಳನ್ನು ಗುಣಪಡಿಸಲು, ನಿನ್ನ ಬಲಹೀನತೆಗಳನ್ನು ಸರಿಪಡಿಸಲು ಮತ್ತು ನಿನ್ನನ್ನು ಸಂಪೂರ್ಣವಾಗಿ ಸ್ವಸ್ಥಮಾಡಲು ಶಕ್ತನಾಗಿದ್ದಾನೆ.

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಯೇಸು ಅವನಿಗೆ– ಎದ್ದು, ನಿನ್ನ ಹಾಸಿಗೆಯನ್ನು ಹೊತ್ತುಕೊಂಡು ನಡೆ ಎಂದನು. ಆ ಕ್ಷಣವೇ ಆ ಮನುಷ್ಯನು ಸ್ವಸ್ಥನಾಗಿ, ತನ್ನ ಹಾಸಿಗೆಯನ್ನು ಹೊತ್ತುಕೊಂಡು ನಡೆದನು…” (ಯೋಹಾ 5:8–9)

Leave A Comment

Your Comment
All comments are held for moderation.