Appam, Appam - Kannada

ಸೆಪ್ಟೆಂಬರ್ 08 – ದೇವರು ಸಂಬಂಧಗಳನ್ನು ಚೈತನ್ಯಪಡಿಸುವನು!

“ನಾನು ಇಕ್ಕಟ್ಟಿನ ದಾರಿಯಲ್ಲಿ ನಡೆಯುವಾಗ ನನ್ನನ್ನು ಚೈತನ್ಯಗೊಳಿಸುವಿ; ನನ್ನ ಶತ್ರುಗಳ ಕೋಪಕ್ಕೆ ವಿರೋಧವಾಗಿ ನಿನ್ನ ಕೈ ಚಾಚುವಿ; ನಿನ್ನ ಬಲಗೈ ನನ್ನನ್ನು ರಕ್ಷಿಸುವದು.” (ಕೀರ್ತನೆ 138:7)

ಗ್ರಾಮೀಣ ಪ್ರದೇಶಗಳಲ್ಲಿ, ಮಳೆಗಾಲ ಪ್ರಾರಂಭವಾಗಿ ಮೊದಲ ಮಳೆ ಬಿದ್ದಾಗ, ಬೇಸಿಗೆಯ ಸುಡುವ ಬಿಸಿಲಿಗೆ ಒಣಗಿಹೋಗಿದ್ದ ಮರಗಳು ಜೀವಕಳೆ ಪಡೆಯುತ್ತವೆ. ಒಣಗಿದಂತೆ ಕಾಣುತ್ತಿದ್ದ ನೆಲವು ಬೇಗನೆ ಹಸಿರು ಹುಲ್ಲಿನಿಂದ ಕಂಗೊಳಿಸುತ್ತದೆ. ಮಣ್ಣಿನಲ್ಲಿ ಗುಪ್ತವಾಗಿದ್ದ ಬೀಜಗಳು ಮೊಳಕೆಯೊಡೆದು ಸುಂದರ ಗಿಡಗಳಾಗಿ ಬೆಳೆಯುತ್ತವೆ. ಮಳೆಯು ಬೆಳೆಗಳಿಗೆ ಜೀವವನ್ನೂ ತಾಜಾತನವನ್ನೂ ತರುತ್ತದೆ. ಎಲ್ಲವೂ ಮರಳಿ ಜೀವ ತಳೆಯುವುದನ್ನು ನೋಡುವುದು ಎಂತಹ ಆನಂದ!

ಅದೇ ರೀತಿಯಲ್ಲಿ, ಪರಿಶುದ್ಧಾತ್ಮನು ಜೀವ ನೀಡುವ ಮತ್ತು ನವೀಕರಿಸುವ ಶಕ್ತಿಯನ್ನು ಹೊಂದಿದ್ದಾನೆ. ಸತ್ಯವೇದವು ಹೀಗೆ ಹೇಳುತ್ತದೆ: “ಯೇಸುವನ್ನು ಸತ್ತವರೊಳಗಿಂದ ಜೀವಿತನಾಗಿ ಎಬ್ಬಿಸಿದಾತನ ಆತ್ಮನು ನಿಮ್ಮಲ್ಲಿ ವಾಸವಾಗಿದ್ದಾರೆ.” (ರೋಮಾ 8:11)

“ಬದುಕಿಸುವಂತಹದ್ದು ಆತ್ಮವೇ; ಮಾಂಸವು ಯಾವದಕ್ಕೂ ಬರುವದಿಲ್ಲ.” (ಯೋಹಾ 6:63) “ಲಿಖಿತರೂಪವಾದ ಒಡಂಬಡಿಕೆಯು ಮರಣವನ್ನುಂಟುಮಾಡುತ್ತದೆ; ದೇವರಾತ್ಮ ಸಂಬಂಧವಾದದ್ದು ಜೀವವನ್ನುಂಟುಮಾಡುತ್ತದೆ.” (2 ಕೊರಿಂಥ 3:6) ಕರ್ತನು ಮುರಿದುಹೋದ ಸಂಬಂಧಗಳನ್ನು ಚೈತನ್ಯಪಡಿಸಿ, ಸರಿಪಡಿಸಲು ಸಾಧ್ಯವೇ ಇಲ್ಲ ಎನ್ನುವದನ್ನು ಪುನಃ ಸ್ಥಾಪಿಸಲು ಶಕ್ತನಾಗಿದ್ದಾನೆ.

ಒಬ್ಬ ಸಹೋದರಿಯು ರಕ್ಷಣೆ ಹೊಂದಿ ಪರಿಶುದ್ಧಾತ್ಮನಿಂದ ತುಂಬಿದ್ದ ತನ್ನ ಏಕೈಕ ಮಗಳನ್ನು ವಿದೇಶದಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ವ್ಯಕ್ತಿಗೆ ಮದುವೆ ಮಾಡಿಕೊಟ್ಟಳು. ಮದುವೆಯ ನಂತರ, ಪತಿಯು ಭಾರತದಲ್ಲಿ ಕೆಲವು ದಿನಗಳಿದ್ದು ನಂತರ ವಿದೇಶಕ್ಕೆ ಹಿಂತಿರುಗಿದನು. ಅವನು ತನ್ನ ಹೆಂಡತಿಗೆ ವೀಸಾ ವ್ಯವಸ್ಥೆ ಮಾಡಿ ನಂತರ ಅವಳನ್ನು ಕರೆದುಕೊಂಡು ಹೋಗಲು ಹಿಂತಿರುಗುವುದಾಗಿ ಹೇಳಿದನು. ಆದರೆ ಆತನಿಂದ ಯಾವುದೇ ಸಂಪರ್ಕವಿಲ್ಲದೆ ಅನೇಕ ದಿನಗಳು ಕಳೆದವು. ಇದ್ದಕ್ಕಿದ್ದಂತೆ ಒಂದು ದಿನ, ಆ ಸಹೋದರಿಗೆ ಅವನಿಂದ ವಿಚ್ಛೇದನದ ನೋಟಿಸ್ ಬಂದಿತು.

ಮನ ಮುರಿಯಲ್ಪಟ್ಟ ಆ ತಾಯಿ ನೇರವಾಗಿ ತನ್ನ ಪ್ರಾರ್ಥನಾ ಕೊಠಡಿಗೆ ಹೋಗಿ ಕಣ್ಣೀರಿನಿಂದ ಪ್ರಾರ್ಥಿಸಲು ಪ್ರಾರಂಭಿಸಿದಳು: “ನನ್ನ ದೇವರೇ, ನನ್ನ ಮಗಳ ಕೌಟುಂಬಿಕ ಜೀವನವನ್ನು ಚೈತನ್ಯಪಡಿಸು. ಮುರಿದುಹೋದ ಈ ಸಂಬಂಧವನ್ನು ನವೀಕರಿಸು. ನನ್ನ ಮಗಳು ಮತ್ತೆ ನಿನ್ನಲ್ಲಿ ಉಲ್ಲಾಸಿಸಿ ಸಂತೋಷಪಡುವಂತೆ ಈ ಕುಟುಂಬವನ್ನು ಪುನರಸ್ಥಾಪಿಸಲಾರಿರಾ?”

ಅವಳು ಅನೇಕ ದಿನಗಳ ಕಾಲ ಉಪವಾಸ ಮಾಡಿ ಪ್ರಾರ್ಥಿಸುವುದನ್ನು ಮುಂದುವರಿಸಿದಳು. ಆ ಸಮಯದಲ್ಲಿ, ದೈವಿಕ ಸನ್ನಿಧಿಯು ಅವಳನ್ನು ಆವರಿಸಿತು, ಮತ್ತು ಸಮಾಧಾನದ ನದಿಯು ಅವಳ ಹೃದಯದ ಆಳದಲ್ಲಿ ಹರಿಯಲು ಪ್ರಾರಂಭಿಸಿತು. ಅವಳು ತನ್ನ ಉಪವಾಸವನ್ನು ಪೂರ್ಣಗೊಳಿಸಿ ಸಂತೋಷದಿಂದ ಹೊರಬಂದಳು.

ಎಂತಹ ಆಶ್ಚರ್ಯ! ಕರ್ತನ ಕೈ ಮಧ್ಯ ಪ್ರವೇಶಿಸಿತು. ಕರ್ತನು ಅವಳ ಮಗಳ ಪತಿಯ ಹೃದಯವನ್ನು ಮಾರ್ಪಡಿಸಿ, ಅವನನ್ನು ದೈವಿಕ ಪ್ರೀತಿಯಿಂದ ತುಂಬಿಸಿದನು. ಕೆಲವೇ ದಿನಗಳಲ್ಲಿ, ಆ ವ್ಯಕ್ತಿಯು ಭಾರತಕ್ಕೆ ಹಿಂತಿರುಗಿ ತನ್ನ ಹೆಂಡತಿಯನ್ನು ತನ್ನೊಂದಿಗೆ ಬಂದು ವಾಸಿಸುವಂತೆ ಅತ್ಯಂತ ಪ್ರೀತಿಯಿಂದ ಕೇಳಿಕೊಂಡನು. ಆ ಕುಟುಂಬವು ಪುನಃ ಸ್ಥಾಪಿಸಲ್ಪಟ್ಟು ಸಂತೋಷಕರ ಮತ್ತು ಸಾಮರಸ್ಯದ ಮನೆಯಾಯಿತು.

ಆ ತಾಯಿ ನಂತರ ತನ್ನ ಅಳಿಯನಿಗಾಗಿ ಪ್ರಾರ್ಥಿಸುವುದನ್ನು ಮುಂದುವರಿಸಿದಳು: “ನನ್ನ ದೇವರೇ, ನೀನು ನನ್ನ ಮಗಳನ್ನು ರಕ್ಷಿಸಿ ನಿನ್ನ ಆತ್ಮನಿಂದ ತುಂಬಿಸಿದಂತೆಯೇ, ಅವಳ ಗಂಡನನ್ನೂ ರಕ್ಷಿಸಿ ತುಂಬಿಸು.” ಕೆಲವೇ ದಿನಗಳಲ್ಲಿ, ಅವನು ಸಹ ರಕ್ಷಣೆಯನ್ನು ಅನುಭವಿಸಿ ತನ್ನ ಕುಟುಂಬದೊಂದಿಗೆ ಕರ್ತನನ್ನು ಸೇವಿಸಲು ತನ್ನನ್ನೇ ಒಪ್ಪಿಸಿಕೊಟ್ಟನು.

ದೇವರ ವಾಕ್ಯವು ಹೀಗೆ ಹೇಳುತ್ತದೆ: “ಮೊದಲನೆಯ ಮಾನುಷ್ಯನಾದ ಆದಾಮನು ಬದುಕುವ ಪ್ರಾಣಿಯಾದನೆಂದು ಬರೆದದೆಯಲ್ಲ. ಕಡೇ ಆದಾಮನೋ ಬದುಕಿಸುವ ಅತ್ಮನು” (1 ಕೊರಿಂಥ 15:45)

ಪ್ರಿಯ ದೇವಜನರೇ, ಮುರಿದುಹೋದ ಸಂಬಂಧಗಳ ವಿಷಯದಲ್ಲಿ ನಿರಾಶೆಗೊಳ್ಳಬೇಡಿರಿ. ಸತ್ತುಹೋಯಿತು ಮತ್ತು ಇನ್ನು ಸರಿಹೋಗುವುದಿಲ್ಲ ಎಂದು ತೋರುವುದು ಕರ್ತನ ಕೈಗೆ ನಿಲುಕದ್ದು ಏನೂ ಅಲ್ಲ. ಪ್ರಾರ್ಥಿಸುವುದನ್ನು ಮುಂದುವರಿಸಿ, ನಂಬಿರಿ ಮತ್ತು ನಿಮ್ಮ ಪ್ರಿಯರನ್ನು ಆತನ ಕೈಗೆ ಒಪ್ಪಿಸಿರಿ. ಜೀವ ನೀಡುವ ಪರಿಶುದ್ಧಾತ್ಮನು ಗಾಯಗೊಂಡ ಹೃದಯಗಳಿಗೆ, ಮುರಿದುಹೋದ ಮನೆಗಳಿಗೆ ಮತ್ತು ಮುಗಿದೇ ಹೋಯಿತು ಎನಿಸುವ ಸಂಬಂಧಗಳಿಗೆ ನೂತನ ಜೀವವನ್ನು ನೀಡಬಲ್ಲನು.

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ಆದರೆ ಕರುಣಾನಿಧಿಯಾಗಿರುವಾಗ ದೇವರು ನಮ್ಮ ಮೇಲೆ ಮಹಾ ಪ್ರತಿಯನ್ನಿಟ್ಟು ಅಪರಾಧಗಳ ದೆಸೆಯಿಂದ ಸತ್ತವರಾಗಿದ್ದ ನಮ್ಮನ್ನು ಕ್ರಿಸ್ತನೊಂದಿಗೆ ನಮ್ಮನ್ನು ಬದುಕಿಸಿದನು. ಕೃಪೆಯಿಂದಲೇ ರಕ್ಷಣೆ ಹೊಂದಿದ್ದದವರಾಗಿದ್ದಿರಿ. ಪ್ರೀತಿಸಿದ ತನ್ನ ಮಹಾ ಪ್ರೀತಿಯ ದೆಸೆಯಿಂದ, ನಾವು ಅಪರಾಧಗಳಲ್ಲಿ ಸತ್ತವರಾಗಿದ್ದಾಗ್ಯೂ ನಮ್ಮನ್ನು ಕ್ರಿಸ್ತನೊಂದಿಗೆ ಜೀವದಾಯಕರನ್ನಾಗಿ ಮಾಡಿದನು (ಕೃಪೆಯಿಂದಲೇ ರಕ್ಷಿಸಲ್ಪಟ್ಟಿದ್ದೀರಿ).” (ಎಫೆಸದ 2:4,5)

Leave A Comment

Your Comment
All comments are held for moderation.