Appam, Appam - Kannada

ಆಗಸ್ಟ್ 11 – ಉನ್ನತ ಸ್ಥಳಗಳು!

“ಅದಕ್ಕೆ ಬಂಡೆಯೇ ನಿವಾಸವು; ಅದು ಶಿಲಾಶೀಖರದಲ್ಲಿಯೂ ದುರ್ಗದಲ್ಲಿಯೂ ತಂಗುವದು. ಅಲ್ಲಿಂದಲೇ ಬೇಟೆಯನ್ನು ನೋಡುತ್ತಾ ದೂರದಲ್ಲಿದ್ದರೂ ಅದನ್ನು ಕಂಡುಹಿಡಿಯುವದು .” (ಯೋಬ 39:28-29)

ಹದ್ದು ಬೇರೆ ಯಾವ ಪಕ್ಷಿಯೂ ಹಾರಲಾಗದ ಎತ್ತರದಲ್ಲಿ ಬಹಳ ಸುಂದರವಾಗಿ ಹಾರುತ್ತದೆ. ಅದೇ ರೀತಿಯಲ್ಲಿ, ವಿಮೋಚನೆಗೊಂಡವರ ಪ್ರಾಣವು ಈ ಲೋಕದ ಆಕರ್ಷಣೆಗಳಿಗಿಂತ ಮೇಲೆ ಇರುತ್ತದೆ, ಅವರು ತಮ್ಮ ಕ್ಷಣಿಕ ಸುಖಗಳನ್ನು ತ್ಯಜಿಸಿ ಮೇಲಿರುವವುಗಳನ್ನೇ ಹುಡುಕುತ್ತಾರೆ. ಹದ್ದಿನ ಹಾಗೆ ಅವರು ರೆಕ್ಕೆಗಳನ್ನು ಚಾಚಿಕೊಂಡು ಪರಲೋಕದ ಎತ್ತರದ ಸ್ಥಳಕ್ಕೆ ಹಾರುತ್ತಾರೆ ಮತ್ತು ಎಲ್ಲಕ್ಕಿಂತ ಉನ್ನತನಾಗಿರುವ ಕ್ರಿಸ್ತನೊಂದಿಗೆ ಹಾರಾಡುತ್ತಾರೆ.

ವಿಶ್ವಾಸಿಗಳಿಗೆ ಬರೆಯುತ್ತಾ, ಅಪೊಸ್ತಲನಾದ ಪೌಲನು ಹೀಗೆ ಹೇಳುತ್ತಾನೆ: “ಆದ ಕಾರಣ ನೀವು ಕ್ರಿಸ್ತನೊಂದಿಗೆ ಎಬ್ಬಿಸಲ್ಪಟ್ಟಿರುವದರಿಂದ ಮೇಲಿರುವವುಗಳನ್ನು ಹುಡುಕಿರಿ… ಮೇಲಿರುವಂಥವುಗಳ ಮೇಲೆ ಮನಸ್ಸಿಡಿರಿ, ಭೂಸಂಬಂಧವಾದವುಗಳ ಮೇಲೆ ಇಡಬೇಡಿರಿ.” (ಕೊಲೊಸ್ಸೆ 3:1-2)

ಮೇಲಿರುವವುಗಳನ್ನು ಹುಡುಕಲು, ಪರಲೋಕದ ಸತ್ಯಗಳ ಮೇಲೆ ನಿಮ್ಮ ನಿರೀಕ್ಷೆಯನ್ನು ಇಡಲು ಮತ್ತು ಉನ್ನತ ಸ್ಥಳಗಳಲ್ಲಿ ಕರ್ತನೊಂದಿಗೆ ನಡೆಯಲು ನೀವು ಕರೆಯಲ್ಪಟ್ಟಿದ್ದೀರಿ. ಇದು ನಿಮ್ಮ ದೈವಿಕ ಕರೆಯಾಗಿದೆ.

ನೀವು ಭೂಮಿಯಲ್ಲಿ ಶರೀರದಲ್ಲಿ ಜೀವಿಸುತ್ತಿದ್ದರೂ, ನಿಮ್ಮೊಳಗೆ ಅಮರವಾದ ಪ್ರಾಣವಿದೆ. ಮಹಿಮೆಯಿಂದ ಮಹಿಮೆಗೆ ಮಾರ್ಪಡಲ್ಪಡುವ ನಿರೀಕ್ಷೆ ನಿಮಗಿದೆ. ಒಂದು ದಿನ, ಆ ಪ್ರಾಣವು ನಿತ್ಯವಾದ ಪರಲೋಕ ರಾಜ್ಯವನ್ನು ಬಾಧ್ಯವಾಗಿ ಹೊಂದುವುದು. ಆದ್ದರಿಂದ, ನೀವು ಯಥಾರ್ಥರಾಗಿ, ಪರಿಶುದ್ಧರಾಗಿ ಮತ್ತು ಕರ್ತನನ್ನು ಮೆಚ್ಚಿಸುವವರಾಗಿ ಜೀವಿಸಲು ಕರೆಯಲ್ಪಟ್ಟಿದ್ದೀರಿ.

ಹದ್ದು ಎಂದಿಗೂ ತಗ್ಗಾದ ಮತ್ತು ಕೀಳಾದ ಸ್ಥಳಗಳಲ್ಲಿ ವಾಸಿಸಲು ಆರಿಸಿಕೊಳ್ಳುವುದಿಲ್ಲ. ಅದು ಕಸದ ರಾಶಿಗಳಲ್ಲಿ ಹುಡುಕಾಡುವುದಿಲ್ಲ. ಬದಲಾಗಿ, ಅದು ಎತ್ತರವನ್ನು ಹುಡುಕುತ್ತದೆ. ಅದೇ ರೀತಿ, ನಿಮ್ಮ ಗುರಿಗಳು, ಆಲೋಚನೆಗಳು ಮತ್ತು ಆಕಾಂಕ್ಷೆಗಳು ಮೇಲಿರುವವುಗಳ ಮೇಲೆ ನೆಲೆಗೊಂಡಿರಲಿ.

ನಿಮ್ಮ ಆಲೋಚನೆಗಳು ಮತ್ತು ಪ್ರಯತ್ನಗಳು ಈ ಪ್ರಸ್ತುತ ಲೋಕದ ಮೇಲೆ ಕೇಂದ್ರೀಕೃತವಾಗಿವೆಯೇ ಅಥವಾ ನಿತ್ಯತೆಯ ಮೇಲೆ ಕೇಂದ್ರೀಕೃತವಾಗಿವೆಯೇ? ಎಂಬುದನ್ನು ನಿಮ್ಮನ್ನೇ ಕೇಳಿಕೊಳ್ಳಿರಿ:

ಇಂದಿಗೂ ಸಹ, ಅನೇಕ ಜನರು ಮದುವೆಗಳನ್ನು ನಿಶ್ಚಯಿಸುವಾಗ ಜಾತಿ ಭೇದಗಳನ್ನು, ಶುಭ ದಿನಗಳನ್ನು, ಸಮಯ ಮತ್ತು ನಕ್ಷತ್ರಗಳನ್ನು ನೋಡುತ್ತಾರೆ. ಆದರೆ ನಂತರ, ದೇವರ ಪ್ರೀತಿಯನ್ನು ತೋರಿಸದೆ, ಸಣ್ಣಪುಟ್ಟ ವಿಷಯಗಳಿಗಾಗಿಯೂ ಕಟುವಾಗಿ ಜಗಳವಾಡುತ್ತಾರೆ.

ಇತರರು ಫರಿಸಾಯರು ಮತ್ತು ಸದ್ದುಕಾಯರಂತೆ ಎಲ್ಲರಲ್ಲೂ ತಪ್ಪುಗಳನ್ನು ಹುಡುಕುತ್ತಾ ಸಂಕುಚಿತ ಗಡಿಗಳಲ್ಲಿಯೇ ಉಳಿದುಬಿಡುತ್ತಾರೆ. ಆದರೆ ಕರ್ತನು ನಿಮ್ಮನ್ನು ಉನ್ನತವಾದವುಗಳಿಗಾಗಿ ಕರೆಯುತ್ತಿದ್ದಾನೆ. ಆತನು, “ಎನ್ನೊಂದಿಗೆ ಲೆಬನೋನಿನಿಂದ ಬಾ! ವಧುವೇ, ಲೆಬಲೋನಿಂದ ನನ್ನೊಂದಿಗೆ ಬಾ” ಎಂದು ಹೇಳುತ್ತಾನೆ. (ಪರಮಗೀತೆ 4:8)

ಒಂದು ವಿಮಾನವು ಮೇಲಕ್ಕೆ ಹೋದಂತೆ, ಕೆಳಗಿರುವ ಮನೆಗಳು, ಕಟ್ಟಡಗಳು, ಭೂಮಿ ಮತ್ತು ಆಸ್ತಿಪಾಸ್ತಿಗಳು ಚಿಕ್ಕದಾಗಿ ಕಾಣಿಸುತ್ತಾ ಕೊನೆಗೆ ಕಣ್ಮರೆಯಾಗುತ್ತವೆ. ಆ ಎತ್ತರದಲ್ಲಿ, ಲೋಕದ ವೈಭವವು ವಾಸ್ತವವಾಗಿ ಎಷ್ಟು ಕ್ಷುಲ್ಲಕವಾಗಿದೆ ಮತ್ತು ಮನುಷ್ಯರು ಅದಕ್ಕಾಗಿ ಎಷ್ಟು ವ್ಯರ್ಥವಾಗಿ ಶ್ರಮಿಸುತ್ತಾರೆ ಎಂಬುದು ಅರಿವಾಗುತ್ತದೆ.

ಅದೇ ರೀತಿಯಲ್ಲಿ, ವಿಶ್ವಾಸಿಗಳು ತಮ್ಮ ಆತ್ಮೀಕ ಜೀವನದಲ್ಲಿ ಎತ್ತರಕ್ಕೆ ಬೆಳೆದಂತೆ, ಲೌಕಿಕ ಆಕರ್ಷಣೆಗಳು ಮತ್ತು ಲೌಕಿಕ ಬಂಧಗಳು ಕ್ರಮೇಣ ತಮ್ಮ ಹಿಡಿತವನ್ನು ಕಳೆದುಕೊಳ್ಳುತ್ತವೆ. ಒಂದು ಕಾಲದಲ್ಲಿ ಬಹಳ ಮುಖ್ಯವೆಂದು ತೋರುತ್ತಿದ್ದ ವಿಷಯಗಳು ಮರೆಯಾಗುತ್ತವೆ. ರಕ್ಷಣೆ ಹೊಂದುವ ಮೊದಲು ಬೆಲೆಬಾಳುವದೆಂದು ಕಂಡದ್ದು, ಕ್ರಿಸ್ತನನ್ನು ತಿಳಿದುಕೊಂಡ ನಂತರ ಕಸವೆಂದು ಪರಿಗಣಿಸಲ್ಪಡುತ್ತದೆ.

ಪ್ರೀತಿಯ ದೇವರ ಮಕ್ಕಳೇ, ಕ್ರಿಸ್ತನ ಪರಿಪೂರ್ಣತೆ, ಆತನು ನಿಮಗಾಗಿ ಸಿದ್ಧಪಡಿಸಿರುವ ಬಾಧ್ಯತೆ ಮತ್ತು ಆತನ ನಿತ್ಯ ರಾಜ್ಯವು ನಿಮ್ಮ ಜೀವಿತದ ಅತ್ಯುನ್ನತ ಆಸೆ ಮತ್ತು ಗುರಿಯಾಗಲಿ.

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ : “ಜಯಹೊಂದುವವನು ಇವುಗಳಿಗೆ ಬಾಧ್ಯನಾಗುವನು; ನಾನು ಅವನಿಗೆ ದೇವರಾಗಿರುವೆನು, ಅವನು ನನಗೆ ಮಗನಾಗಿರುವನು.” (ಪ್ರಕ 21:7)

Leave A Comment

Your Comment
All comments are held for moderation.

// Day of week // Sunday=0, Monday=1, Tuesday=2, Wednesday=3, Thursday=4, Friday=5, Saturday=6