Appam, Appam - Kannada

ಆಗಸ್ಟ್ 13 – ದೇವರನ್ನು ಮೆಚ್ಚಿಸಿರಿ!

“ನನ್ನ ದೇವರೇ, ನಿನ್ನ ಚಿತ್ತವನ್ನು ಅನುಸರಿಸುವುದೇ ನನ್ನ ಸಂತೋಷವು; ನಿನ್ನ ಧರ್ಮೋಪದೇಶವು ನನ್ನ ಅಂತರಂಗದಲ್ಲಿದೆ.” (ಕೀರ್ತನೆ 40:8)

ಎಲ್ಲದಕ್ಕಿಂತ ಹೆಚ್ಚಾಗಿ, ದೇವರನ್ನು ಮೆಚ್ಚಿಸುವ ಪ್ರಾಮಾಣಿಕ ಆಸೆ ನಿಮ್ಮಲ್ಲಿರಬೇಕು. ಆ ಆಸೆ ಇಲ್ಲದಿದ್ದರೆ, ನೀವು ಕೇವಲ ಹೆಸರಿಗೆ ಮಾತ್ರ ಕ್ರೈಸ್ತರಾಗಿ ಉಳಿಯಬಹುದು; ಕ್ರಿಸ್ತನೊಂದಿಗಿನ ಜೀವಿತದ ನೈಜತೆಯನ್ನು ಅನುಭವಿಸದೆ ಕೇವಲ ನಾಮದೇಯ ಕ್ರೈಸ್ತರಾಗಿರಬಹುದು.

ಕರ್ತನ ಮೇಲಿನ ಪ್ರೀತಿಯೇ ಆತನನ್ನು ಮೆಚ್ಚಿಸಲು ನಮ್ಮನ್ನು ಪ್ರೇರೇಪಿಸುತ್ತದೆ. ಆ ಪ್ರೀತಿಯು ಆತನೊಂದಿಗೆ ಕೈ ಹಿಡಿದು ನಡೆಯುವ ಹಂಬಲವನ್ನು ನಮ್ಮೊಳಗೆ ಸೃಷ್ಟಿಸುತ್ತದೆ. ನಾವು ಕರ್ತನನ್ನು ಮೆಚ್ಚಿಸಲು ಬಯಸುತ್ತಾ ಆತನೊಂದಿಗೆ ನಿಕಟವಾಗಿ ನಡೆದಾಗ, ಆತನು ನಮ್ಮನ್ನು ಸಂತೋಷದಿಂದ ನೋಡಿ, “ನೀನು ನನಗೆ ಬಹಳ ಪ್ರಿಯನಾಗಿದ್ದೀ” ಮತ್ತು “ನನ್ನ ಪ್ರಿಯಳೇ, ನೀನು ಸುಂದರಿಯಾಗಿದ್ದೀ” ಎಂದು ಹೇಳುತ್ತಾನೆ.

ಸಾಧು ಸುಂದರ್ ಸಿಂಗ್ ಅವರು ಕರ್ತನೊಂದಿಗೆ ನಿಕಟವಾಗಿ ನಡೆದವರು ಮತ್ತು ತಮ್ಮ ಜೀವಿತವನ್ನು ಸಂಪೂರ್ಣವಾಗಿ ಆತನಿಗೆ ಸಮರ್ಪಿಸಿಕೊಂಡವರು. ಒಮ್ಮೆ, ಒಬ್ಬ ಯುವ ರಾಜಕುಮಾರನು ಅವರನ್ನು ತನ್ನ ಅರಮನೆಗೆ ಆದರದಿಂದ ಆಹ್ವಾನಿಸಿದನು. ಆ ರಾಜಕುಮಾರನು ಕ್ರೈಸ್ತ ಧರ್ಮ ಮತ್ತು ಆಧ್ಯಾತ್ಮಿಕ ವಿಷಯಗಳಲ್ಲಿ ಆಳವಾದ ಆಸಕ್ತಿಯನ್ನು ತೋರಿಸಿದನು.

ಅವನು ಹೀಗೆ ಅರಿಕೆ ಮಾಡಿದನು, “ಅಯ್ಯಾ, ಯೇಸು ಕ್ರಿಸ್ತನ ಮೂಲಕ ನಾನು ಅಧಿಕವಾದ ಆಶೀರ್ವಾದಗಳನ್ನು ಪಡೆದಿದ್ದರೂ, ಆತನನ್ನು ಬಹಿರಂಗವಾಗಿ ಅರಿಕೆ ಮಾಡಿಕೊಳ್ಳಲು ಇರುವ ನನ್ನ ದೌರ್ಬಲ್ಯಕ್ಕಾಗಿ ನಾನು ದುಃಖಿಸುತ್ತೇನೆ. ನಾನು ಹಾಗೆ ಮಾಡಿದರೆ, ನನ್ನ ಸ್ವಂತ ಜನರೇ ನನ್ನನ್ನು ತಿರಸ್ಕರಿಸುತ್ತಾರೆ, ಮತ್ತು ನಾನು ನನ್ನ ರಾಜಮನೆತನದ ಆಸ್ತಿಯನ್ನು ಕಳೆದುಕೊಳ್ಳುತ್ತೇನೆ.”

ಆ ಯುವ ರಾಜಕುಮಾರನನ್ನು ಕರುಣೆಯಿಂದ ನೋಡುತ್ತಾ, ಸಾಧು ಸುಂದರ್ ಸಿಂಗ್ ಉತ್ತರಿಸಿದರು: “ನೀವು ಈ ಭೂಮಿಯ ಮೇಲೆ ಸ್ವಲ್ಪ ಕಾಲ ಮಾತ್ರ ಜೀವಿಸುತ್ತೀರಿ, ಆದರೆ ಪರಲೋಕದಲ್ಲಿ ನಿಮ್ಮ ಜೀವನವು ಶಾಶ್ವತವಾಗಿರುತ್ತದೆ. ಈ ಲೋಕದ ಸಾಮ್ರಾಜ್ಯಗಳು ಶೀಘ್ರದಲ್ಲೇ ಗತಿಸಿಹೋಗುತ್ತವೆ, ಆದರೆ ನಿತ್ಯವಾದ ರಾಜ್ಯವು ಎಂದಿಗೂ ಕೊನೆಗೊಳ್ಳುವುದಿಲ್ಲ. ನಿಮ್ಮ ಲೌಕಿಕ ಜೀವಿತದಲ್ಲಿ ನೀವು ಕ್ರಿಸ್ತನ ಕೈ ಹಿಡಿದು ನಡೆದರೆ, ಆತನು ನಿಮ್ಮ ಕೈ ಹಿಡಿದು ತನ್ನ ಮಹಿಮಾಭರಿತ ಪರಲೋಕ ರಾಜ್ಯಕ್ಕೆ ನಡೆಸುತ್ತಾನೆ, ಅಲ್ಲಿ ಆತನು ನಿಮ್ಮೊಂದಿಗೆ ಶಾಶ್ವತವಾಗಿರುತ್ತಾನೆ. ಆದಕಾರಣ, ‘ಮೊದಲು ದೇವರ ರಾಜ್ಯಕ್ಕಾಗಿಯೂ ಆತನ ನೀತಿಗಾಗಿಯೂ ತವಕಿಸಿರಿ.'” (ಮತ್ತಾ 6:33)

ಕ್ರೈಸ್ತೀಯ ಜೀವನದ ಅತ್ಯುನ್ನತ ಅನುಭವಗಳಲ್ಲಿ ಒಂದೆಂದರೆ: ನೀವು ದೇವರಲ್ಲಿ ಆನಂದಿಸುತ್ತೀರಿ, ಮತ್ತು ದೇವರು ನಿಮ್ಮಲ್ಲಿ ಆನಂದಿಸುತ್ತಾನೆ. ಅದು ನಿಮ್ಮ ಅನುಭವವಾದಾಗ, ಸತ್ಯವೇದದ ಪ್ರತಿಯೊಂದು ವಾಕ್ಯವೂ ನಿಮಗೆ ಅಮೂಲ್ಯವಾಗುತ್ತದೆ – “ಅವು ಜೇನಿಗಿಂತಲೂ ಶೋಧಿಸಿದ ಜೇನು ತುಪ್ಪಕ್ಕಿಂತಲೂ ಸಿಹಿಯಾಗಿವೆ.” (ಕೀರ್ತನೆ 19:10)

ಕೀರ್ತನೆಗಾರನು ಹೀಗೆ ಘೋಷಿಸುತ್ತಾನೆ: “ಯೆಹೋವನ ಧರ್ಮಶಾಸ್ತ್ರದಲ್ಲಿ ಆನಂದಪಡುವವನಾಗಿ ಅದನ್ನೇ ಹಗಲಿರುಳು ಧ್ಯಾನಿಸುತ್ತಿರುವನೋ ಅವನು ಎಷ್ಟೋ ಧನ್ಯನು.” (ಕೀರ್ತನೆ 1:2)

ಕರ್ತನನ್ನು ಮೆಚ್ಚಿಸಲು ದೃಢಸಂಕಲ್ಪ ಮಾಡಿದ್ದ ದಾವೀದನು ಹೀಗೆ ಪ್ರಾರ್ಥಿಸಿದನು: “ನನಗೆ ಜ್ಞಾನವನ್ನು ದಯಪಾಲಿಸು; ಆಗ ನಿನ್ನ ಧರ್ಮಶಾಸ್ತ್ರವನ್ನು ಪೂರ್ಣಮನಸ್ಸಿನಿಂದ ಕೈಕೊಂಡು ನಡೆಯುವೆನು. ನಿನ್ನ ಆಜ್ಞಾಮಾರ್ಗದಲ್ಲಿ ನನ್ನನ್ನು ನಡಿಸು; ಅದೇ ನನ್ನ ಇಷ್ಟ .” (ಕೀರ್ತನೆ 119:34-35)

ಪ್ರಿಯ ದೇವರ ಮಕ್ಕಳೇ, ನಿಮ್ಮ ಹೃದಯವು ಕರ್ತನನ್ನು ಮೆಚ್ಚಿಸಲು ತೀರ್ಮಾನಿಸುವಾಗ, ಆತನ ಜನರೊಂದಿಗೆ ಸೇರುವುದು ಮತ್ತು ಆತನ ಆಲಯದಲ್ಲಿ ಆರಾಧಿಸುವುದು ಕೇವಲ ಒಂದು ಕೆಲಸವಾಗಿರದೇ, ನಿಜವಾದ ಸಂತೋಷದ ಸಂದರ್ಭಗಳಾಗುತ್ತವೆ. ಆದ್ದರಿಂದ, ಕರ್ತನನ್ನು ಪ್ರೀತಿಸಿರಿ, ಆತ್ಮದಿಂದಲೂ ಸತ್ಯದಿಂದಲೂ ಆತನನ್ನು ಆರಾಧಿಸಿರಿ ಮತ್ತು ಆತನ ಸನ್ನಿಧಿಯಲ್ಲಿ ಆನಂದಿಸಿರಿ.

ಮುಂದಿನ ಅಧ್ಯಾಯನಕ್ಕಾಗಿ ದೇವರ ವಾಕ್ಯ: “ನಮ್ಮ ಯೆಹೋವದೇವರ ಪ್ರಸನ್ನತೆಯು ನಮ್ಮ ಮೇಲೆ ಇರಲಿ; ನಾವು ಕೈಹಾಕಿದ ಕೆಲಸವನ್ನು ನಮಗೆ ಸಫಲಪಡಿಸು.” (ಕೀರ್ತನೆ 90:17)

Leave A Comment

Your Comment
All comments are held for moderation.

// Day of week // Sunday=0, Monday=1, Tuesday=2, Wednesday=3, Thursday=4, Friday=5, Saturday=6